ಭಗವದ್ಗೀತೆಯಿಂದ ಬದುಕಿನ ಪಾಠ ಕಲಿಯೋಣ: ಜಿ.ವಿ. ರವಿಕುಮಾರ್
ಮಡಿಕೇರಿ: ಶ್ರೀಕೃಷ್ಣನನ್ನು ಕೇವಲ ಶ್ರದ್ಧಾಭಕ್ತಿಯಿಂದ ಪೂಜಿಸುವುದಷ್ಟೇ ಅಲ್ಲದೆ, ಅವರ ಜ್ಞಾನ, ಸತ್ಯ, ಪ್ರೀತಿ, ಶಿಸ್ತು ಹಾಗೂ ಧರ್ಮದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಜಿ.ವಿ. ರವಿಕುಮಾರ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಪುಷ್ಪಾಲಂಕಾರ ಮತ್ತು ಪುಷ್ಪಾರ್ಚನೆ ಮಾಡುವುದರ ಹಿಂದಿನ ಉದ್ದೇಶ ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಜೀವನದಲ್ಲಿರುವ ಪ್ರೀತಿ, ಒಗ್ಗಟ್ಟು, ಸಹಬಾಳ್ವೆ, ಶಿಸ್ತು ಹಾಗೂ ಮಾನವೀಯತೆಯ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಭಗವದ್ಗೀತೆಯ ಸಂದೇಶ ಇಂದಿಗೂ ಮಾನವಕುಲಕ್ಕೆ ದಾರಿದೀಪವಾಗಿದೆ. ಕರ್ತವ್ಯ, ಧರ್ಮ ಹಾಗೂ ಜೀವನ ಮೌಲ್ಯಗಳ ಸಾರ ಭಗವದ್ಗೀತೆಯಲ್ಲಿ ಅಡಕವಾಗಿದ್ದು, ಫಲದ ನಿರೀಕ್ಷೆಯಿಲ್ಲದೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳು ಮಾನವನಿಗೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಅಸಹಾಯಕನಾಗಿದ್ದು, ಪ್ರಕೃತಿಯನ್ನು ಪ್ರೀತಿಸಿ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕುಶಾಲನಗರದ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಉಪನ್ಯಾಸ ನೀಡಿ, ಶ್ರೀಕೃಷ್ಣ ಕೇವಲ ದೇವತೆಯಲ್ಲ, ಬದುಕುವ ಕಲೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಯೋಗೇಶ್ವರ ಎಂದು ಬಣ್ಣಿಸಿದರು. ಭಾಗವತದಲ್ಲಿ ಕೃಷ್ಣನ ಲೀಲೆಗಳು, ಮಹಾಭಾರತದಲ್ಲಿ ರಾಜತಾಂತ್ರಿಕತೆ ಹಾಗೂ ಧರ್ಮಸ್ಥಾಪನೆ, ಭಗವದ್ಗೀತೆಯಲ್ಲಿ ಜೀವನ ತತ್ವಗಳನ್ನು ಕಾಣಬಹುದಾಗಿದೆ ಎಂದರು.
ವಿದ್ಯಾರ್ಥಿಯಾಗಿ, ಬಾಲಕನಾಗಿ, ಸ್ನೇಹಿತನಾಗಿ, ರಾಜಕಾರಣಿಯಾಗಿ, ಆಡಳಿತಗಾರನಾಗಿ ಹಾಗೂ ಸಮಾಜಮುಖಿ ವ್ಯಕ್ತಿಯಾಗಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಅಧ್ಯಯನ ಮಾಡಿದರೆ ಬದುಕಿಗೆ ಅಗತ್ಯವಾದ ಅನೇಕ ಪಾಠಗಳು ದೊರೆಯುತ್ತವೆ ಎಂದು ಹೇಳಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ಕೃಷ್ಣಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ; ಮಕ್ಕಳಲ್ಲಿ ಸಂಭ್ರಮ, ಉತ್ಸಾಹ ಮತ್ತು ಕುಟುಂಬಗಳಲ್ಲಿ ಸಂತಸದ ವಾತಾವರಣ ಮೂಡಿಸುವ ವಿಶೇಷ ಹಬ್ಬವಾಗಿದೆ ಎಂದರು. ಇಂತಹ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಸಮಿತಿ ಖಜಾಂಚಿ ಜಿ.ಸಿ. ರಮೇಶ್ ಮಾತನಾಡಿ, ಕಾರಾಗೃಹದಲ್ಲಿ ಜನಿಸಿದ ಶ್ರೀಕೃಷ್ಣ ತನ್ನ ಜೀವನದುದ್ದಕ್ಕೂ ಧರ್ಮ, ನ್ಯಾಯ ಮತ್ತು ಕರ್ತವ್ಯದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದು ಹೇಳಿದರು.
ಮಡಿಕೇರಿ ತಾಲೂಕು ತಹಶೀಲ್ದಾರ್ ಶ್ರೀಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಲ್. ದಾಸ, ಗೌರವಾಧ್ಯಕ್ಷ ಜಿ.ಎ. ಚಾಮಿ, ಜಿ.ಜಿ. ಬಾಲಕೃಷ್ಣ, ಉಪಾಧ್ಯಕ್ಷ ಜಿ.ಸಿ. ಜಗದೀಶ್, ಪ್ರಧಾನ ಕಾರ್ಯದರ್ಶಿ ಜಿ.ಆರ್. ಗಣೇಶ್, ನಿರ್ದೇಶಕ ರಘುರಾಮ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್.ಎಲ್. ದಿವಾಕರ್, ಮಹಿಳಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಮ್ಯ ಕಾರ್ಯಕ್ರಮ ನಿರೂಪಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿ, ವಂದಿಸಿದರು.

