ಕುಶಾಲನಗರ: ಸಿ.ಎನ್.ಸಿ. ಅಧ್ಯಕ್ಷ ನೆರವಂಡ ನಾಚಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೆಲವು ಬೇಡಿಕೆಗಳಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ ಎಂದು ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.
ಪ್ರತ್ಯೇಕ ‘ಕೊಡವ ಲ್ಯಾಂಡ್’ ರಚನೆ, ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಆಡಳಿತಾತ್ಮಕ ಹಾಗೂ ರಾಜಕೀಯ ಸ್ಥಾನಮಾನ, ಎಸ್ಟಿ ಮೀಸಲಾತಿ ಹಾಗೂ ಈಗಾಗಲೇ ಮಾರಾಟವಾಗಿರುವ ಜಮೀನುಗಳನ್ನು ಮರಳಿ ಪಡೆಯುವ ಬೇಡಿಕೆಗಳು ಇತರ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಎದುರಿಸಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು, ಸಾಂಪ್ರದಾಯಿಕ ಕೋವಿ ಹಕ್ಕು ಸೇರಿದಂತೆ ಕೊಡವರ ಸಾಂಸ್ಕೃತಿಕ ಹಕ್ಕುಗಳ ಬೇಡಿಕೆಗಳಿಗೆ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಒಕ್ಕೂಟದ ನಿರ್ಧಾರವನ್ನು ತಪ್ಪಾಗಿ ಬಿಂಬಿಸಲಾಗಿದ್ದು, ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಮಾಡಿರುವ ಆರೋಪಗಳನ್ನೂ ಖಂಡಿಸುವುದಾಗಿ ಹೇಳಿದ್ದಾರೆ. “ಕೊಡಗು ನಮ್ಮೆಲ್ಲರದು; ಹಕ್ಕು, ಗೌರವ ಮತ್ತು ನ್ಯಾಯ ಎಲ್ಲರಿಗೂ ಇರಬೇಕು. ಕೊಡವರ ವಿರುದ್ಧವಲ್ಲ, ಅಸಾಂವಿಧಾನಿಕ ಬೇಡಿಕೆಗಳ ವಿರುದ್ಧ ನಮ್ಮ ಹೋರಾಟ” ಎಂದು ಕೊಡಗನ ಹರ್ಷ ಸ್ಪಷ್ಟಪಡಿಸಿದ್ದಾರೆ.
ಅವರ ಹೇಳಿಕೆಯ ಮಾಹಿತಿ
ಗೌಡ ಯುವಕ ಸಂಘ (ರಿ.), ಕುಶಾಲನಗರ — ಸ್ಪಷ್ಟನೆ
ಕೊಡಗು ಜಿಲ್ಲೆಯು ವಿವಿಧ ಮೂಲನಿವಾಸಿ ಜನಾಂಗಗಳು ಹಾಗೂ ಇತರ ಸಮುದಾಯಗಳು ಶತಮಾನಗಳಿಂದ ಸೌಹಾರ್ದತೆ ಮತ್ತು ಪರಸ್ಪರ ಗೌರವದಿಂದ ಜೀವಿಸುತ್ತಿರುವ ಪುಣ್ಯಭೂಮಿಯಾಗಿದೆ. ಇತ್ತೀಚೆಗೆ ಸಿ.ಎನ್.ಸಿ. (ಕೊಡವ ನ್ಯಾಷನಲ್ ಕೌನ್ಸಿಲ್) ಅಧ್ಯಕ್ಷರಾದ ನೆರವಂಡ ನಾಚಪ್ಪನವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೆಲವು ಅಸಾಂವಿಧಾನಿಕ ಬೇಡಿಕೆಗಳ ಕುರಿತು ಕೊಡಗು ಗೌಡ ಸಮಾಜಗಳ ಒಕ್ಕೂಟವು ವಿಶೇಷ ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿದೆ. ಈ ಕುರಿತು ಗೌಡ ಯುವಕ ಸಂಘದ ಅಧ್ಯಕ್ಷನಾದ ನಾನು ಸ್ಪಷ್ಟಪಡಿಸುವುದೇನೆಂದರೆ:
1. ಅಸಾಂವಿಧಾನಿಕ ಬೇಡಿಕೆಗಳಿಗೆ ಒಕ್ಕೊರಲಿನ ವಿರೋಧ
ಪ್ರತ್ಯೇಕ ‘ಕೊಡವ ಲ್ಯಾಂಡ್’ ರಚನೆ, ಕೊಡಗಿನಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಆಡಳಿತಾತ್ಮಕ ಮತ್ತು ರಾಜಕೀಯ ಸ್ಥಾನಮಾನ, ಪರಿಶಿಷ್ಟ ಪಂಗಡ (ST) ಮೀಸಲಾತಿ ಹಾಗೂ ಈಗಾಗಲೇ ಮಾರಾಟವಾಗಿರುವ ಜಮೀನುಗಳನ್ನು ಮರಳಿ ಹಿಂಪಡೆಯುವಂತಹ ಬೇಡಿಕೆಗಳು ಜಿಲ್ಲೆಯಲ್ಲಿ ವಾಸಿಸುವ ಇತರ ಸಮುದಾಯಗಳ ಹಕ್ಕುಗಳಿಗೆ ತೀವ್ರ ಧಕ್ಕೆ ತರುತ್ತವೆ. ಈ ಬೇಡಿಕೆಗಳು ಸಾಮಾಜಿಕ ಸಮತೋಲನವನ್ನು ಭಂಗಗೊಳಿಸುವುದರಿಂದ ಒಕ್ಕೂಟವು ಇವುಗಳನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಕಾನೂನಾತ್ಮಕವಾಗಿ ಎದುರಿಸಲು ನಿರ್ಧರಿಸಿದೆ.
2. ಸಾಂಸ್ಕೃತಿಕ ಬೇಡಿಕೆಗಳಿಗೆ ವಿರೋಧವಿಲ್ಲ
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು, ಕೊಡವರ ಸಾಂಪ್ರದಾಯಿಕ ಕೋವಿ (ಬಂದೂಕು) ಹಕ್ಕನ್ನು ಕಾಯ್ದುಕೊಳ್ಳುವುದು ಹಾಗೂ ಅವರ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಬೇಡಿಕೆಗಳಿಗೆ ಗೌಡ ಸಮಾಜವಾಗಲಿ ಅಥವಾ ಇತರ ಸಮುದಾಯಗಳಾಗಲಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಅವರ ಸಾಂಸ್ಕೃತಿಕ ಹಕ್ಕುಗಳನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ.
*3. ಮಾಧ್ಯಮಗಳ ತಪ್ಪು ವರದಿ ಮತ್ತು ಆರೋಪಗಳ ಖಂಡನೆ*
ಒಕ್ಕೂಟದ ನಿರ್ಧಾರವನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ಬಿತ್ತರಿಸಿರುವುದು ವಿಷಾದನೀಯ. ಅಲ್ಲದೆ, ಸಭೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಲಿ ಹಾಗೂ ಮಾಜಿ ಶಾಸಕರ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವುದು ಹಾಸ್ಯಾಸ್ಪದ. ಗೌಡ ಯುವಕ ಸಂಘವು ಇದನ್ನು ತೀವ್ರವಾಗಿ ಖಂಡಿಸುತ್ತದೆ.
ಒಂದು ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಹೆಸರಿನಲ್ಲಿ ಇತರ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಬೇಡಿಕೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ.
*4. ನೈಜ ಸೌಹಾರ್ದತೆಯ ತುರ್ತು ಅಗತ್ಯ*
ತಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಸ್ವ-ಸಂಸ್ಕೃತಿಯ ವೈಭವೀಕರಣವು ಇತರ ಸಮುದಾಯಗಳ ಮೇಲಿನ ಸವಾರಿಯಾಗಬಾರದು. ಪ್ರತಿಯೊಬ್ಬರೂ ಇತರರ ಅಸ್ತಿತ್ವವನ್ನು ಗೌರವಿಸಿದಾಗ ಮಾತ್ರ ಕೊಡಗು ತನ್ನ ನೈಜ ಶಾಂತಿ ಹಾಗೂ ಸೌಹಾರ್ದತೆಯನ್ನು ಉಳಿಸಿಕೊಳ್ಳಲು ಸಾಧ್ಯ.
*ವಿಜ್ಞಾಪನೆ:*
ನಮ್ಮ ಈ ಹೋರಾಟವು ಕೊಡಗಿನ ಶಾಂತಿ-ನೆಮ್ಮದಿಗೆ ಧಕ್ಕೆ ತರಬಲ್ಲ ಸಿ.ಎನ್.ಸಿ.ಯ ಅಸಾಂವಿಧಾನಿಕ ಬೇಡಿಕೆಗಳ ವಿರುದ್ಧವೇ ಹೊರತು, ಸೋದರ ಸಮಾನರಾದ ಸಮಸ್ತ ಕೊಡವ ಬಾಂಧವರ ವಿರುದ್ಧ ಖಂಡಿತವಾಗಿಯೂ ಅಲ್ಲ. ಕೊಡಗಿನ ಪ್ರಬುದ್ಧ ಜನತೆ ಈ ವ್ಯತ್ಯಾಸವನ್ನು ಮನಗಂಡು, ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕಾಗಿ ವಿನಂತಿ.
*ಕೊಡಗು ನಮ್ಮೆಲ್ಲರದು — ಹಕ್ಕು ಎಲ್ಲರಿಗೂ, ಗೌರವ ಎಲ್ಲರಿಗೂ, ನ್ಯಾಯ ಎಲ್ಲರಿಗೂ. 🤝*
— ಕೊಡಗನ ಹರ್ಷ
ಅಧ್ಯಕ್ಷರು, ಗೌಡ ಯುವಕ ಸಂಘ (ರಿ.), ಕುಶಾಲನಗರ

