ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ
ಮಡಿಕೇರಿ: ನಗರದ ಜಿಟಿ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ಉಂಟಾಗಿರುವ ಕೆಸರು ಹಾಗೂ ಮಣ್ಣಿನ ರಾಶಿಯಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಂತರವಾಗಿ ಜೆಸಿಬಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಪರಿಣಾಮ ಆ ಭಾಗ ಗದ್ದೆಯಂತಾಗಿದ್ದು, ಮಳೆ ನೀರು ಸೇರಿ ಕೆಸರಿನ ಮಯವಾಗಿರುವುದರಿಂದ ನಡೆದಾಡುವುದೇ ದುಸ್ತರವಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರು ನಗರದಲ್ಲಿ ಭಾರೀ ವಾಹನಗಳ ನಿಲುಗಡೆಗೆ ನಿಷೇಧ ಹೇರಿದ್ದರೂ, ಕಳೆದ ಕೆಲವು ದಿನಗಳಿಂದ ಜೆಸಿಬಿ ವಾಹನವನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮಡಿಕೇರಿಯ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿರುವ ಈ ಪರಿಸ್ಥಿತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಜೆಸಿಬಿ ವಾಹನವನ್ನು ತೆರವುಗೊಳಿಸಿ, ರಸ್ತೆ ಬದಿಯ ಕೆಸರನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.



