ಮಡಿಕೇರಿ : ಸೂರ್ಲಬ್ಬಿ ಗ್ರಾಮದಲ್ಲಿ ಯುವಕನಿಂದ ಹತ್ಯೆಗೀಡಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿಯ ಕುಟುಂಬಕ್ಕಾಗಿ ರೂ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಮನೆಯನ್ನು, ಶಾಸಕ ಡಾ. ಮಂತರ್ ಗೌಡ ಹಸ್ತಾಂತರಿಸಿದರು.

2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ10ರಂದು ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಹತ್ಯೆಗೊಳಗಾದ ವಿದ್ಯಾರ್ಥಿನಿ ಮೀನಾ(16) ಕುಟುಂಬಕ್ಕೆ ನೀಡಲು ಮನೆಯನ್ನು ನಿರ್ಮಿಸಲಾಗಿದೆ. ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಮತ್ತು ಜಾನಕಿ ದಂಪತಿ ಪುತ್ರಿ ಮೀನಾ ಜೊತೆ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್‌ ಜೊತೆ ಫಲಿತಾಂಶ ಬಂದ ದಿನ ಮದುವೆ ನಿಶ್ಚಿತಾರ್ಥ ಆಗಿತ್ತು. ಹೆಚ್ಚಿನ ಶಿಕ್ಷಣದ ಹಂಬಲವಿದ್ದ ಮೀನಾ ‘ಈಗಲೇ ಮದುವೆ ಬೇಡ’ ಎಂದು ಪೋಷಕರಲ್ಲಿ ಹೇಳಿದ ಬೆನ್ನಲ್ಲೇ ಪ್ರಕಾಶ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ. ನಂತರ ಪೊಲೀಸರು ಆತನನ್ನುಬಂಧಿಸಿದ್ದರು.

‌ಶಾಸಕ ಡಾ.ಮಂತರ್ ಗೌಡ ಮೀನಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭ, ಮನೆ ಜಾಗಕ್ಕೆ ಯಾವುದೇ ದಾಖಲೆಯಿಲ್ಲ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಹಿತೈಷಿಗಳ ನೆರವಿನೊಂದಿಗೆ ಮನೆಯನ್ನು ನಿರ್ಮಿಸಿದ್ದಾರೆ.

ಉನ್ನತ ವ್ಯಾಸಂಗ ಮಾಡಿ ಅಧಿಕಾರಿಯಾಬೇಕೆಂಬ ಆಸೆ ಹೊತ್ತಿದ್ದ ಪುತ್ರಿ ಮೀನಾ ಈಗಿಲ್ಲ. ಆಕೆಯ ನೆನಪಿಗಾಗಿ ಶಾಸಕರು ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿದ್ದೇವೆ. ಆದರೆ ಮಗಳಿಲ್ಲದ ನೋವು ಕಾಡುತ್ತಿದೆ’

ಮೀನಾಳ ಪೋಷಕರು.

ಮೃತ ಮೀನಾಳ ಮನೆಗೆ ಭೇಟಿ ನೀಡಿದಾಗ ತಮಗೆ ವಾಸಿಸಲು ಉತ್ತಮ ಮನೆಯಿಲ್ಲ. ಮನೆ ನಿರ್ಮಿಸಿಕೊಡುವಂತೆ ಪೋಷಕರು ಮನವಿ ಮಾಡಿದ್ದರು. ಆ ಸಂದರ್ಭ ನೀಡಿದ ಭರವಸೆಯಂತೆ ನಾನು ಹಾಗೂ ಹಿತೈಷಿಗಳು ವೆಚ್ಚ ಭರಿಸಿ ಮನೆಯನ್ನು ನಿರ್ಮಿಸಿದ್ದೇವೆ. ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಯವುದು ಎಲ್ಲರ ಕರ್ತವ್ಯ

 

ಡಾ.ಮಂತರ್ ಗೌಡ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ.

 

Exit mobile version