
ಮಡಿಕೇರಿ–ವೀರಾಜಪೇಟೆ ಹೆದ್ದಾರಿಯ ಮೇಕೇರಿ ಬಳಿ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆಯ ದುಸ್ಥಿತಿಯನ್ನು ಮನಗಂಡ ಮೇಕೇರಿಯ ಸ್ವಾಗತ ಯುವಕ ಸಂಘದ ಕಾರ್ಯಕರ್ತರು ಇಂದು ಸ್ವಯಂಪ್ರೇರಿತರಾಗಿ ಹೊಂಡಗಳಿಗೆ ಮಣ್ಣು ತುಂಬಿ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಟ್ಟರು.
ಪ್ರಮುಖ ರಾಜ್ಯ ಹೆದ್ದಾರಿಯಾಗಿರುವ ಮಡಿಕೇರಿ–ವೀರಾಜಪೇಟೆ ರಸ್ತೆಯಲ್ಲಿ ಈ ರೀತಿಯಾಗಿ ಹೊಂಡಗಳು ನಿರ್ಮಾಣಗೊಂಡಿರುವುದರಿಂದ ಅಪಘಾತದ ಅಪಾಯವೂ ಎದುರಾಗಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಅವುಗಳ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಸೇರಿದಂತೆ ವಾಹನ ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ.



