ಕೊಡಗಿನಲ್ಲಿ ಪಕ್ಷಾಂತರ ಪರ್ವ: ಬಿಜೆಪಿಗೆ ನಾಯಕತ್ವದ ಸವಾಲು, ಕಾಂಗ್ರೆಸ್ಗೆ ರಾಜಕೀಯ ಅವಕಾಶ
ಆಡಳಿತ ಪಕ್ಷದತ್ತ ವಿರೋಧ ಪಕ್ಷದ ಕಾರ್ಯಕರ್ತರ ಒಲವು | ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ರಾಜಕೀಯ ಚಟುವಟಿಕೆ ಚುರುಕು
ಸುರೇಶ್ ಬಿಳಿಗೇರಿ.
ಕೊಡಗಿನ ರಾಜಕೀಯದಲ್ಲಿ ಇದೀಗ ಪಕ್ಷಾಂತರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿರುವ ಬೆಳವಣಿಗೆಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಗಳ ಸಂಘಟನೆಗೂ ಹೊಸ ಆಯಾಮ ನೀಡಿದೆ.
ಕಳೆದ ಕೆಲ ಸಮಯದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಕಾರ್ಯಕ್ರಮಗಳು ನಡೆಯುತ್ತಿವೆ. ನೂರಾರು ಕಾರ್ಯಕರ್ತರು ಪಕ್ಷ ಸೇರುತ್ತಿದ್ದಾರೆ ಎಂಬ ಬೆಳವಣಿಗೆಗಳ ನಡುವೆಯೇ, ಕೊಡಗು ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆಗಳ ವೇಗದ ಬಗ್ಗೆ ಪಕ್ಷದೊಳಗೇ ಚರ್ಚೆ ಆರಂಭವಾಗಿದೆ.
ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ?
ಕೊಡಗು ಬಿಜೆಪಿಯಲ್ಲಿ ಹಲವು ಮಂದಿ ಮುಂದಿನ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿ ರಾಜಕೀಯ ಚಟುವಟಿಕೆ ನಡೆಸುತ್ತಿರುವುದು ಕಂಡುಬರುತ್ತಿದೆ. ಆದರೆ ಟಿಕೆಟ್ಗಾಗಿ ನಡೆಯುತ್ತಿರುವ ಓಡಾಟದಷ್ಟೇ ಪಕ್ಷ ಸಂಘಟನೆಗೆ ಒತ್ತು ಸಿಗುತ್ತಿದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಪಕ್ಷದ ಹಿರಿಯ ಹಾಗೂ ಪ್ರಮುಖ ನಾಯಕರು ಕಾರ್ಯಕರ್ತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಬೇಕಿದೆ ಎಂಬ ಅಭಿಪ್ರಾಯ ಬಿಜೆಪಿಯೊಳಗಿನ ಕೆಲ ವಲಯಗಳಲ್ಲಿ ಕೇಳಿಬರುತ್ತಿದೆ.
ಇದೇ ಸಂದರ್ಭದಲ್ಲಿ ಬಿಜೆಪಿ ವಕ್ತಾರ ರವಿ ಕುಶಾಲಪ್ಪ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದರೂ, ಕಾರ್ಯಕರ್ತರ ಪಕ್ಷ ತೊರೆಯುವ ಬೆಳವಣಿಗೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹ.
ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಬಿಜೆಪಿ ಸದ್ದು
ಕೊಡಗು ಬಿಜೆಪಿಯ ನೆಲಮಟ್ಟದ ಸಂಘಟನೆಗೆ ಹೋಲಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಚಟುವಟಿಕೆಗಳು ಹೆಚ್ಚು ಗೋಚರಿಸುತ್ತಿವೆ ಎಂಬ ವಿಶ್ಲೇಷಣೆಗಳೂ ಇವೆ. ಕಳೆದ ಮೂರು ವರ್ಷಗಳಿಂದ ಬೆರಳೆಣಿಕೆಯ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಪರ ನಿರಂತರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೊಡಗು ಸಮಸ್ಯೆಗಳು ಮತ್ತು ಪರಿಹಾರಗಳು ಸೇರಿದಂತೆ ವಿವಿಧ ವಾಟ್ಸಾಪ್ ಬಳಗಗಳ ಮೂಲಕ ಜಿಲ್ಲೆಯ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಬಿಜೆಪಿ ಪರ ವಾತಾವರಣವನ್ನು ಜೀವಂತವಾಗಿಡುವ ಪ್ರಯತ್ನವೂ ನಡೆಯುತ್ತಿದೆ.
ಅಂದರೆ, ಪಕ್ಷದ ಅಧಿಕೃತ ಸಂಘಟನಾ ಚಟುವಟಿಕೆಗಳಿಗಿಂತ ಕೆಲವು ನಿಷ್ಠಾವಂತ ಕಾರ್ಯಕರ್ತರ ವೈಯಕ್ತಿಕ ಪ್ರಯತ್ನಗಳೇ ಬಿಜೆಪಿಯ ಸಾರ್ವಜನಿಕ ಗೋಚರತೆಯನ್ನು ಉಳಿಸಿಕೊಳ್ಳುತ್ತಿವೆಯೇ ಎಂಬ ಪ್ರಶ್ನೆಯೂ ಇದೀಗ ಚರ್ಚೆಯಲ್ಲಿದೆ.
ಕಾಂಗ್ರೆಸ್ನ ಐಟಿ ತಂಡಕ್ಕೆ ಸಂಘಟನೆಯ ಬೆಂಬಲ
ಇತ್ತ ಕಾಂಗ್ರೆಸ್ ತನ್ನ ರಾಜಕೀಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಶಾಸಕದ್ವಯರ ಕಾರ್ಯಕ್ರಮಗಳು, ಸಭೆಗಳು, ಕ್ಷೇತ್ರ ಪ್ರವಾಸಗಳು ಹಾಗೂ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿರಂತರವಾಗಿ ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ನ ಐಟಿ ತಂಡಗಳು ಮಾಡುತ್ತಿವೆ.
ಕಾರ್ಯಕ್ರಮ ನಡೆಯುವುದಷ್ಟೇ ಅಲ್ಲ, ಅದರ ಮಾಹಿತಿ ಸಾಮಾಜಿಕ ಜಾಲತಾಣಗಳ ಮೂಲಕ ತಕ್ಷಣ ಜನರಿಗೆ ತಲುಪುವಂತೆ ಮಾಡುವ ವ್ಯವಸ್ಥೆ ಕಾಂಗ್ರೆಸ್ಗೆ ಸಾರ್ವಜನಿಕ ಸಂಪರ್ಕದಲ್ಲಿ ನೆರವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ಗೆ ಪಕ್ಷಾಂತರ ರಾಜಕೀಯದ ಲಾಭ?
ಬಿಜೆಪಿಯೊಳಗಿನ ಸಂಘಟನಾ ಸವಾಲುಗಳನ್ನು ಕಾಂಗ್ರೆಸ್ ತನ್ನ ರಾಜಕೀಯ ವಿಸ್ತರಣೆಗೆ ಬಳಸಿಕೊಳ್ಳುತ್ತಿದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಆಡಳಿತ ಪಕ್ಷದತ್ತ ವಿರೋಧ ಪಕ್ಷದ ಕಾರ್ಯಕರ್ತರ ಒಲವು ಹೆಚ್ಚಾದರೆ, ಅದು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೆಲಮಟ್ಟದ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಪಕ್ಷಾಂತರದ ಪ್ರಮಾಣ, ಅದರ ಹಿಂದಿರುವ ಸ್ಥಳೀಯ ಕಾರಣಗಳು ಮತ್ತು ಅದರ ಚುನಾವಣಾ ಪರಿಣಾಮವನ್ನು ಈಗಲೇ ನಿರ್ಧರಿಸುವುದು ಕಷ್ಟವೂ ಹೌದು.
ಬಿಜೆಪಿಗೆ ಬೇಕಿರುವುದು ಹೊಸ ಮುಖವೇ?
ಕೊಡಗು ಬಿಜೆಪಿಯ ಮುಂದಿರುವ ಪ್ರಮುಖ ಪ್ರಶ್ನೆ ಇದೀಗ ಇದೇ—ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯನ್ನು ಬಲಪಡಿಸುವ ಸಮರ್ಥ ನಾಯಕತ್ವದ ಅಗತ್ಯವಿದೆಯೇ? ಒಂದೆಡೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಕಾರ್ಯಕರ್ತರ ಪಕ್ಷಾಂತರದ ಚರ್ಚೆ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಕಾರ್ಯಕರ್ತರು ಪಕ್ಷದ ಧ್ವನಿಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕೊಡಗು ಬಿಜೆಪಿಗೆ ಮುಂದಿನ ದಿನಗಳಲ್ಲಿ ಸಂಘಟನಾತ್ಮಕವಾಗಿ ಹೊಸ ಚೈತನ್ಯ ತುಂಬುವ ನಾಯಕತ್ವ ದೊರೆಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ, ಕೊಡಗಿನಲ್ಲಿ ಪಕ್ಷಾಂತರದ ರಾಜಕೀಯ ಆರಂಭವಾಗಿರುವ ಈ ಹಂತದಲ್ಲಿ ಕಾಂಗ್ರೆಸ್ ಅದನ್ನು ತನ್ನ ಸಂಘಟನೆ ವಿಸ್ತರಣೆಗೆ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದ್ದರೆ, ಬಿಜೆಪಿ ಎದುರು ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಮತ್ತು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸುವ ಸವಾಲು ಎದುರಾಗಿದೆ. ಮುಂದಿನ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಈ ರಾಜಕೀಯ ಚಲನೆಗಳು ಯಾವ ದಿಕ್ಕಿಗೆ ಸಾಗುತ್ತವೆ ಎಂಬುದೇ ಈಗಿನ ಕುತೂಹಲ.


