ಇಂಗು ಗುಂಡಿಯೊಳಗೆ ಉಸಿರುಗಟ್ಟಿ ಇಬ್ಬರ ದಾರುಣ ಸಾವು
ಮಾದಾಪುರ:
ಒಬ್ಬರ ಜೀವ ಉಳಿಸಲು ಧಾವಿಸಿದ ನೆರೆಮನೆಯಾತನೂ ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆ ಮಾದಾಪುರ ಸಮೀಪದ ಹೊಸತೋಟದಲ್ಲಿ ನಡೆದಿದೆ.
ಮನೆಯ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿ ಬಳಿ ತೆರಳಿದ್ದ ಐಗೂರು ಗ್ರಾಮದ ಹೊಸತೋಟದ ನಿತ್ಯ (47) ಅವರು ಏಕಾಏಕಿ ಗುಂಡಿ ಕುಸಿದು ಅದರೊಳಗೆ ಸಿಲುಕಿಕೊಂಡಿದ್ದಾರೆ. ಅವರನ್ನು ಕಂಡು ಆತಂಕಗೊಂಡ ನೆರೆಮನೆಯ ಜನಾರ್ಧನ (47) ಅವರು ಕ್ಷಣವೂ ಯೋಚಿಸದೆ ರಕ್ಷಣೆಗೆ ಧಾವಿಸಿ ಗುಂಡಿಯೊಳಗೆ ಇಳಿದಿದ್ದಾರೆ.
ಆದರೆ…
ನಿತ್ಯ ಅವರನ್ನು ಬದುಕಿಸಲು ಇಳಿದ ಜನಾರ್ಧನ ಅವರಿಗೂ ಅದೇ ಗುಂಡಿ ಸಾವಿನ ಕೂಪವಾಯಿತು.
ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದಿಂದ ಇಬ್ಬರೂ ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಮಾದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯೆಯೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಒಬ್ಬರನ್ನೊಬ್ಬರು ರಕ್ಷಿಸಬೇಕೆಂಬ ಮಾನವೀಯ ಕಾಳಜಿ ಕೊನೆಗೆ ಎರಡು ಕುಟುಂಬಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಆಸ್ಪತ್ರೆಯ ಆವರಣದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿತ್ತು.
ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ. ಸೋಮಶೇಖರ್, ಡಾ. ನಂಜುಂಡ ಸೇರಿದಂತೆ ವೈದ್ಯರು ಉಪಸ್ಥಿತರಿದ್ದರು.
ಒಬ್ಬರನ್ನು ಉಳಿಸುವ ಧಾವಂತದಲ್ಲಿ ಮತ್ತೊಂದು ಜೀವವೂ ಕಳೆದುಹೋಯಿತು…
ಹೊಸತೋಟದಲ್ಲಿ ಎರಡು ಕುಟುಂಬಗಳ ಪಾಲಿಗೆ ಈ ಸಂಜೆ ಎಂದಿಗೂ ಮರೆಯಲಾಗದ ಕರಾಳ ಸಂಜೆಯಾಗಿದೆ

