
ಮಡಿಕೇರಿ: ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನಲೆ ಕ್ಷುಲ್ಲಕ ಕಾರಣಕ್ಕೆ ಗೌತಮ್ ಎಂಬಾತನ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಸುಹೈಲ್ ಎಂಬಾತ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದ ಬಳಿಕ ಪ್ರಚೋದನೆ ಮತ್ತು ಬೆದರಿಕೆ ಒಡ್ಡುವ ರೀತಿಯಲ್ಲಿ ಇನ್ಸ್ಟಾ ದಲ್ಲಿ ರೀಲ್ಸ್ ಮಾಡಿ ಬಿಟ್ಟಿದ್ದ. ರೀಲ್ಸ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಆತನ ಮೇಲೆ ಕ್ರಮ ಜರುಗಿಸಿ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸುವಂತೆ ಮನವಿ ಮಾಡಿದೆ.
ಸಾಮಾಜಿಕ ಜಾಲತಾಣ ಪರಿಶೀಲನೆ ವೇಳೆಯಲ್ಲಿ ನಾಪೋಕ್ಲು ವ್ಯಾಪ್ತಿಯ ಯುವಕನೊಬ್ಬ ರೀಲ್ಸ್, ವೀಡಿಯೋ ಮತ್ತು ಆಡಿಯೋಗಳನ್ನು ಪ್ರಸಾರ ಮಾಡಿ ಪ್ರಚೋಧನಕಾರಿ ಹೇಳಿಕೆ ನೀಡಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ಆತ ತನ್ನ ಸಾಮಾಜಿಕ ಜಾಲತಾಣ Instagram ಖಾತೆಯ ಮೂಲಕ ಪ್ರಚೋಧನಕಾರಿ ಬರಹ ಮತ್ತು ವೀಡಿಯೋ ಹಂಚಿಕೊಂಡಿದ್ದು, ಇದನ್ನು ಪರಿಶೀಲಿಸಲಾಗಿ ಇದು ಸಮಾಜದಲ್ಲಿ ಅಶಾಂತಿ, ಸಾರ್ವಜನಿಕ ಸೌಹಾರ್ಧತೆಗೆ ಧಕ್ಕೆಯಾಗುವ ರೀತಿಯ ನಡೆ ಎಂದು ಪರಿಗಣಿಸಿದ್ದು, ಈತನ ಹಿನ್ನೆಲೆಯನ್ನು ಪರಿಶೀಲಿಸಲಾಗಿ ಈತ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿ ಮತ್ತು ಜಾಮೀನು ರದ್ದುಪಡಿಸುವಂತೆ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಜನಾಂಗದ ಮಧ್ಯೆ, ಧರ್ಮಗಳ ನಡುವೆ ಹಿಂಸೆ ಅಥವಾ ಅಶಾಂತಿಯನ್ನು ಪ್ರಚೋದಿಸುವ ಯಾವುದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡುವುದು/ಪೋಸ್ಟ್ ಹಂಚುವುದು ಕಾನೂನುಬಾಹಿರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ನಿರ್ದೇಶಿಸಲಾಗಿದೆ.

