ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಂದ ಹಿಡಿದು ರೋಬೋಟಿಕ್ ಬೆನ್ನುಮೂಳೆ ಚಿಕಿತ್ಸೆವರೆಗೆ:-ನಾರಾಯಣ ಹೆಲ್ತ್ ಸಿಟಿಯಿಂದ 10,000 ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೈಲಿಗಲ್ಲು ಸಾಧನೆ

ನಾರಾಯಣ ಹೆಲ್ತ್ ಸಿಟಿಯಲ್ಲಿ 10,000ಕ್ಕೂ ಹೆಚ್ಚು ಆರ್ಥೊಪೆಡಿಕ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ರೋಬೋಟಿಕ್ ವ್ಯವಸ್ಥೆಗಳು ಆಧುನಿಕ ಕೀಲು ಮತ್ತು ಬೆನ್ನುಮೂಳೆ ಚಿಕಿತ್ಸೆಯನ್ನು ಸಂಪೂರ್ಣವಾಗಿ ಬದಲಿಸುತ್ತಿವೆ.

10 ಮಾರ್ಚ್, ಮಡಿಕೇರಿ: ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗೆ ಹೊಸ ಭಾಷ್ಯ ಬರೆದಿರುವ ನಾರಾಯಣ ಹೆಲ್ತ್ ಸಿಟಿಯು, ಕಳೆದ ಮೂರು ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಮೂಳೆ ಶಸ್ತ್ರಚಿಕಿತ್ಸೆಗಳನ್ನು ಪೂರೈಸುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧನೆ ಮಾಡಿದೆ. ಈ ಸಾಧನೆಯಲ್ಲಿ 1,000ಕ್ಕೂ ಅಧಿಕ ರೋಬೋಟಿಕ್ ನೆರವಿನ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಗಳು ಸೇರಿವೆ ಎಂಬುದು ವಿಶೇಷ.

ಕ್ಷೀಣಿಸುತ್ತಿರುವ ಕೀಲು ಕಾಯಿಲೆಗಳಿಂದ ಹಿಡಿದು ಸಂಕೀರ್ಣ ಬೆನ್ನುಮೂಳೆ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳವರೆಗೆ ವಿವಿಧ ಸ್ನಾಯುಸಂಬಂಧಿ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಯು ಅತ್ಯುತ್ಕೃಷ್ಟ ಪರಿಣತಿ ಹೊಂದಿರುವುದನ್ನು ಈ ಸಾಧನೆಯು ಪ್ರತಿಬಿಂಬಿಸುತ್ತದೆ.

ಇಂದು ಆರ್ಥೊಪೆಡಿಕ್ ಶಸ್ತ್ರಚಿಕಿತ್ಸೆಗಳನ್ನು ಯೋಜಿಸುವ ಮತ್ತು ನಿರ್ವಹಿಸುವ ವಿಧಾನದಲ್ಲಿ ಬಹಳ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಖರತೆಯನ್ನು ಹೆಚ್ಚಿಸಲು ಮತ್ತು ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲು ಶಸ್ತ್ರಚಿಕಿತ್ಸಕರು ಸುಧಾರಿತ ಇಮೇಜಿಂಗ್, ಡಿಜಿಟಲ್ ಯೋಜನಾ ಪರಿಕರಗಳು ಮತ್ತು ರೋಬೋಟಿಕ್ ಚಾಲಿತ ವ್ಯವಸ್ಥೆಗಳ ಸಂಯೋಜನೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕೀಲು ಮರುಜೋಡಣೆ ಮತ್ತು ಸಂಕೀರ್ಣ ಬೆನ್ನುಮೂಳೆ ಪುನರ್ನಿರ್ಮಾಣದಂತಹ ಪ್ರಕ್ರಿಯೆಗಳಲ್ಲಿ ಆಸ್ಪತ್ರೆಗಳು ರೋಬೋಟಿಕ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಕ್ರಮೇಣ ಭಾರಿ ಬದಲಾವಣೆಯು ನಡೆಯುತ್ತಿದೆ. ಈ ಪರಿಕರಗಳು ಶಸ್ತ್ರಚಿಕಿತ್ಸಕರಿಗೆ ಶಸ್ತ್ರಚಿಕಿತ್ಸೆಗಿಂತ ಮೊದಲೇ ಯೋಜನೆಯನ್ನು ರೂಪಿಸಲು, ಕೀಲುಗಳ ಜೋಡಣೆಯನ್ನು ವಿವರವಾಗಿ ಅಧ್ಯಯನ ಮಾಡಲು ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹೆಚ್ಚಿನ ನಿಖರತೆಯೊಂದಿಗೆ ಕಾರ್ಯಗತಗೊಳಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ಇಂಪ್ಲಾಂಟ್ ಇರಿಸುವಿಕೆಯಲ್ಲಿ ಸಣ್ಣ ವ್ಯತ್ಯಾಸಗಳೂ ದೀರ್ಘಕಾಲದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ, ಇಂಥಾ ಸಂದರ್ಭಗಳಲ್ಲಿ ಇವು ಬಹಳ ಸಹಕಾರಿಯಾಗಿದೆ.

ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ, ವಿಶೇಷವಾಗಿ ಎಚ್ಚರಿಕೆಯ ಯೋಜನೆ ಮತ್ತು ನಿಖರತೆಯ ಅಗತ್ಯವಿರುವ ಸಂಕೀರ್ಣ ಪ್ರಕರಣಗಳಲ್ಲಿ ಈ ತಂತ್ರಜ್ಞಾನಗಳ ಪ್ರಭಾವವು ದಿನನಿತ್ಯದ ವೈದ್ಯಕೀಯ ಕ್ರಮಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ನಾರಾಯಣ ಹೆಲ್ತ್‌ ನ ವೈದ್ಯರು ಹೇಳುತ್ತಾರೆ.

ಆರ್ಥೊಪೆಡಿಕ್ಸ್ ಮತ್ತು ಕೀಲು ಮರುಜೋಡಣೆ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಮತ್ತು ಕ್ಲಿನಿಕಲ್ ಲೀಡ್ ಡಾ. ಅಭಿನಂದನ್ ಎಸ್. ಪುನೀತ್ ಅವರು ಮಾತನಾಡಿ, ರೋಬೋಟಿಕ್ ವ್ಯವಸ್ಥೆಗಳು ರೋಗಿಯ ಅಂಗರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ರೂಪಿಸಲು ಶಸ್ತ್ರಚಿಕಿತ್ಸಕರಿಗೆ ಅನುವು ಮಾಡಿಕೊಡುತ್ತವೆ ಎಂದು ಹೇಳಿದರು. ಈ ಕುರಿತು ವಿವರವಾಗಿ ಮಾತನಾಡಿದ ಅವರು, “ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ, ಇಂಪ್ಲಾಂಟ್ ಜೋಡಣೆಯಲ್ಲಿ ಸಣ್ಣ ವ್ಯತ್ಯಾಸ ಆದರೂ ಕೀಲು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇಂಪ್ಲಾಂಟ್ ಎಷ್ಟು ಕಾಲ ಬಾಳಿಕೆ ಬರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದರೆ ರೋಬೋಟಿಕ್ ಚಾಲಿತ ವ್ಯವಸ್ಥೆಗಳು ರೋಗಿಯ ಕೀಲು ರಚನೆಯನ್ನು ವಿವರವಾಗಿ ವಿಶ್ಲೇಷಿಸಲು ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಪ್ರವೇಶಿಸುವ ಮೊದಲೇ ಹೆಚ್ಚಿನ ನಿಖರತೆಯೊಂದಿಗೆ ಕಾರ್ಯವಿಧಾನವನ್ನು ಯೋಜಿಸಲು ನಮಗೆ ಸಹಾಯ ಮಾಡುತ್ತವೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಈ ವೇದಿಕೆಯು ನಮಗೆ ಸೂಕ್ತ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತದೆ. ಈ ಮೂಲಕ ಮೂಳೆ ಕತ್ತರಿಸುವಿಕೆ ಮತ್ತು ಇಂಪ್ಲಾಂಟ್ ಇರಿಸುವಿಕೆಯನ್ನು ಹೆಚ್ಚು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ. ಈ ಮಟ್ಟದ ಯೋಜನೆ ಮತ್ತು ನಿಯಂತ್ರಣವು ಉತ್ತಮ ಚಿಕಿತ್ಸೆ ನೀಡಲು ಮತ್ತು ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ ರೋಗಿಗಳ ಶೀಘ್ರ ಚೇತರಿಕೆ ಮತ್ತು ದೀರ್ಘಕಾಲದಲ್ಲಿ ಉತ್ತಮ ಆರೋಗ್ಯ ಹೊಂದಲು ಬೆಂಬಲ ನೀಡುತ್ತದೆ” ಎಂದು ಹೇಳಿದರು.

ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ, ಜೀವನಶೈಲಿ ಆಧಾರಿತ ಕೀಲು ಸವಕಳಿ ಮತ್ತು ಸ್ನಾಯುಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವಲ್ಲಿ ಆಗುವ ವಿಳಂಬದಿಂದಾಗಿ ಆರ್ಥೊಪೆಡಿಕ್ ಸರ್ಜನ್ ಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ವೈದ್ಯಕೀಯ ತಂತ್ರಜ್ಞಾನದ ಬಳಕೆ ಅತ್ಯಂತ ಪ್ರಸ್ತುತವಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ. ಮಂಡಿ ನೋವು ಮತ್ತು ನಡಿಗೆಯ ಸಮಸ್ಯೆಯಿಂದ ಬಳಲುತ್ತಿದ್ದ 69 ವರ್ಷದ ವೃದ್ಧರೊಬ್ಬರು ಸಂಕೀರ್ಣ ‘ನೀ ಅಸ್ಥಿಯೋಆರ್ಥ್ರೈಟಿಸ್’ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿವರವಾದ ಇಮೇಜಿಂಗ್ ಪರೀಕ್ಷೆಯು ಅವರ ಕೀಲುಗಳು ಸಂಪೂರ್ಣವಾಗಿ ಸವೆದಿರುವುದನ್ನು ಖಚಿತಪಡಿಸಿತು. ಶಸ್ತ್ರಚಿಕಿತ್ಸಕ ತಂಡವು ರೋಬೋಟಿಕ್ ವ್ಯವಸ್ಥೆಯ ನೆರವಿನ ಟೋಟಲ್ ನೀ ರಿಪ್ಲೇಸ್‌ ಮೆಂಟ್ ಚಿಕಿತ್ಸೆಯನ್ನು ಆಯ್ದುಕೊಂಡಿತು. ಈ ತಂತ್ರಜ್ಞಾನವು ರೋಗಿಯ ವಿಶಿಷ್ಟ ಅಂಗರಚನೆಗೆ ಅನುಗುಣವಾಗಿ ಮೂಳೆಯ ಸಿದ್ಧತೆ ಮತ್ತು ಇಂಪ್ಲಾಂಟ್ ಜೋಡಣೆಯನ್ನು ಮುಂಚಿತವಾಗಿಯೇ ಯೋಜಿಸಲು ನೆರವಾಯಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಅತಿ ಶೀಘ್ರವಾಗಿ ನಡೆಯಲು ಆರಂಭಿಸಿದ್ದು, ನಿಖರ ಯೋಜನೆಯು ವೇಗವಾಗಿ ಚೇತರಿಸಿಕೊಳ್ಳಲು ಹೇಗೆ ಸಹಾಯವಾಗುತ್ತದೆ ಎಂಬುದನ್ನು ಸಾಬೀತುಪಡಿಸಿತು.

ಈ ಕುರಿತು ಮಾಹಿತಿ ನೀಡಿದ ಡಾ. ವಿನು ರಾಜ್ (ಕನ್ಸಲ್ಟೆಂಟ್- ಸ್ಪೈನ್ ಸರ್ಜರಿ), “ಬೆನ್ನುಹುರಿ ಮತ್ತು ಅತ್ಯಂತ ಪ್ರಮುಖ ನರಗಳ ಹತ್ತಿರ ಶಸ್ತ್ರಚಿಕಿತ್ಸೆ ಮಾಡುವಾಗ ನ್ಯಾವಿಗೇಷನ್ ಸಿಸ್ಟಮ್‌ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯು ಅತ್ಯುನ್ನತ ಮಟ್ಟದ ನಿಖರತೆಯನ್ನು ಬಯಸುತ್ತದೆ. ಇಲ್ಲಿ ಸ್ಕ್ರೂ ಅಳವಡಿಕೆಯಲ್ಲಿ ಆಗುವ ಸಣ್ಣ ವ್ಯತ್ಯಾಸವೂ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಸುಧಾರಿತ ನ್ಯಾವಿಗೇಷನ್ ವ್ಯವಸ್ಥೆಗಳು ರೋಗಿಯ ಅಂಗರಚನೆಯನ್ನು ನೈಜ ಸಮಯದಲ್ಲಿ ವೀಕ್ಷಿಸಲು ನಮಗೆ ಸಹಾಯ ಮಾಡುತ್ತವೆ. ತಂತ್ರಜ್ಞಾನವು ನಿಖರತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಿದರೂ, ಶಸ್ತ್ರಚಿಕಿತ್ಸಕನ ಅನುಭವ ಮತ್ತು ನಿರ್ಧಾರವೇ ಪ್ರತಿಯೊಂದು ಹಂತದಲ್ಲೂ ಮಹತ್ವದ್ದಾಗಿರುತ್ತದೆ” ಎಂದು ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ, ಕಳೆದ ಕೆಲವು ತಿಂಗಳುಗಳಿಂದ ತೀವ್ರವಾದ ಬೆನ್ನುನೋವು ಮತ್ತು ನಡಿಗೆಯ ಸಮಸ್ಯೆಯಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ತಪಾಸಣೆಯ ನಂತರ ಅವರಿಗೆ ‘ಲಂಬಾರ್ ಸ್ಪಾಂಡಿಲೋಲಿಸ್ಥೆಸಿಸ್’ (ಒಂದು ಬೆನ್ನುಮೂಳೆಯ ಮೂಳೆ ಮತ್ತೊಂದರ ಮೇಲೆ ಜಾರುವುದು) ಇರುವುದು ಪತ್ತೆಯಾಯಿತು. ಇದರಿಂದಾಗಿ ಅವರ ನರಗಳು ಒತ್ತಲ್ಪಟ್ಟು ತೀವ್ರ ನೋವು ಉಂಟಾಗುತ್ತಿತ್ತು. ಶಸ್ತ್ರಚಿಕಿತ್ಸಕರ ತಂಡವು ಬಾಧಿತ ನರಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ವಿಶೇಷ ಉಪಕರಣಗಳನ್ನು ಬಳಸಿ ಬೆನ್ನುಮೂಳೆಯನ್ನು ಸ್ಥಿರಗೊಳಿಸುವ ‘ಲಂಬಾರ್ ಫ್ಯೂಷನ್’ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಶಸ್ತ್ರಚಿಕಿತ್ಸೆಯ ನಂತರ ವ್ಯವಸ್ಥಿತ ಫಿಸಿಯೋಥೆರಪಿ ಮತ್ತು ಸಮರ್ಪಕ ಆರೈಕೆಯಿಂದಾಗಿ, ರೋಗಿಯು ಕ್ರಮೇಣ ತನ್ನ ನಡಿಗೆ ಸಾಮರ್ಥ್ಯವನ್ನು ಮರಳಿ ಪಡೆದರಲ್ಲದೆ, ನೋವಿನಿಂದ ಸಂಪೂರ್ಣ ಮುಕ್ತಿ ಹೊಂದಿದರು.

ಶಸ್ತ್ರಚಿಕಿತ್ಸೆ, ಅರಿವಳಿಕೆ ಮತ್ತು ಪುನರ್ವಸತಿ ತಂಡಗಳ ನಡುವೆ ಹೆಚ್ಚಿನ ಸಮನ್ವಯ ಅಗತ್ಯವಿರುವ ಹತ್ತಾರು ವೈದ್ಯಕೀಯ ಸಂಕೀರ್ಣ ಪ್ರಕರಣಗಳನ್ನು ಆಸ್ಪತ್ರೆಯು ಯಶಸ್ವಿಯಾಗಿ ನಿಭಾಯಿಸಿದೆ. ಇಂತಹ ಒಂದು ಪ್ರಕರಣದಲ್ಲಿ, ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮತ್ತು ಪ್ರಸ್ತುತ ವೈದ್ಯಕೀಯ ಚಿಕಿತ್ಸೆಯಲ್ಲಿದ್ದ 71 ವರ್ಷದ ವೃದ್ಧರೊಬ್ಬರು, ಫಿಟ್ಸ್ ಬಂದ ಕಾರಣ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಅವರ ಆರೋಗ್ಯದ ಸ್ಥಿತಿಗತಿ ಮತ್ತು ಮುರಿತದ ತೀವ್ರತೆಯನ್ನು ಪರಿಗಣಿಸಿ, ಶಸ್ತ್ರಚಿಕಿತ್ಸಕರು ‘ರಿವರ್ಸ್ ಟೋಟಲ್ ಶೋಲ್ಡರ್ ಆರ್ತ್ರೋಪ್ಲ್ಯಾಸ್ಟಿ’ ಎಂಬ ವಿಶೇಷ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಇದು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುವ ಸಂಕೀರ್ಣ ಮೂಳೆ ಮುರಿತ ಸಮಸ್ಯೆಗಳಿಗೆ ಬಳಸುವ ಅತ್ಯಾಧುನಿಕ ಚಿಕಿತ್ಸೆಯಾಗಿದೆ.

ಈ ಕುರಿತು ಮಾಹಿತಿ ನೀಡಿದ ಆರ್ಥೊಪೆಡಿಕ್ಸ್ ಮತ್ತು ಕೀಲು ಮರುಜೋಡಣೆ ವಿಭಾಗದ ಕನ್ಸಲ್ಟೆಂಟ್ ಡಾ. ಕೆ. ಎಸ್. ಕುಶಾಲಪ್ಪ ಅವರು, ಇಂಪ್ಲಾಂಟ್ ವಿನ್ಯಾಸ ಮತ್ತು ಶಸ್ತ್ರಚಿಕಿತ್ಸಾ ಯೋಜನಾ ಪರಿಕರಗಳಲ್ಲಿನ ಪ್ರಗತಿಯು ಇಂತಹ ಗಾಯಗಳಿಗೆ ಚಿಕಿತ್ಸೆ ನೀಡುವ ಸಾಧ್ಯತೆಗಳನ್ನು ಅಗಾಧಗೊಳಿಸಿದೆ ಎಂದರು. ಈ ಕುರಿತು ವಿವರಣೆ ನೀಡಿದ ಅವರು, “ಇಂದಿನ ಅನೇಕ ರೋಗಿಗಳು, ವಿಶೇಷವಾಗಿ ವಯಸ್ಸಾದವರು, ಸಂಕೀರ್ಣ ಮೂಳೆ ಮುರಿತ ಅಥವಾ ಮಧುಮೇಹ, ಹೃದ್ರೋಗದಂತಹ ಅನೇಕ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಇಂಪ್ಲಾಂಟ್ ತಂತ್ರಜ್ಞಾನ ಮತ್ತು ಸುಧಾರಿತ ಇಮೇಜಿಂಗ್ ವಿಧಾನಗಳು ಈಗ ನಮಗೆ ಅತ್ಯಂತ ಕಠಿಣವಾದ ಪ್ರಕರಣಗಳಲ್ಲೂ ಕೀಲುಗಳನ್ನು ಪುನರ್ನಿರ್ಮಿಸಲು ಮತ್ತು ಸ್ಥಿರತೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ರಿವರ್ಸ್ ಶೋಲ್ಡರ್ ಆರ್ತ್ರೋಪ್ಲ್ಯಾಸ್ಟಿ ಚಿಕಿತ್ಸೆ ರೋಗಿಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ನೆರವಾಗುತ್ತದೆ,” ಎಂದು ಅವರು ಹೇಳಿದರು.

ರೋಬೋಟಿಕ್ ನೆರವು ಕೇವಲ ಕೀಲು ಮರುಜೋಡಣೆಗೆ ಮಾತ್ರ ಸೀಮಿತವಾಗಿಲ್ಲ. ಸಂಕೀರ್ಣವಾದ ಮರು-ಶಸ್ತ್ರಚಿಕಿತ್ಸೆಗಳು ಬೆನ್ನುಮೂಳೆಯ ವಕ್ರತೆಯ ಸರಿಪಡಿಸುವಿಕೆ ಮತ್ತು ಪುನರ್ನಿರ್ಮಾಣ ಪ್ರಕ್ರಿಯೆಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ, ತಂತ್ರಜ್ಞಾನವು ಕೇವಲ ವೈದ್ಯಕೀಯ ಪರಿಣತಿ, ಪುನರ್ವಸತಿ ಬೆಂಬಲ ಮತ್ತು ಆರಂಭಿಕ ರೋಗನಿರ್ಣಯದ ಒಂದು ಭಾಗವಾಗಿರಬೇಕು ಎಂದು ತಜ್ಞರು ಒತ್ತಿಹೇಳುತ್ತಾರೆ.

ವಯಸ್ಸಾದ ಜನಸಂಖ್ಯೆ, ಕುಳಿತಲ್ಲೇ ಕೆಲಸ ಮಾಡುವ ಜೀವನಶೈಲಿ ಮತ್ತು ಕ್ರೀಡಾ ಗಾಯಗಳಿಂದಾಗಿ ಮೂಳೆ ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದಾಗಿ ಭವಿಷ್ಯದ ಮೂಳೆ ಚಿಕಿತ್ಸೆಯು ತಂತ್ರಜ್ಞಾನ ಆಧಾರಿತ ಯೋಜನೆ ಮತ್ತು ಕನಿಷ್ಠ ಆಕ್ರಮಣಕಾರಿ ವಿಧಾನಗಳ ಮೇಲೆ ಹೆಚ್ಚು ಅವಲಂಬಿತವಾಗಲಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೂರೈಸಲಾದ 10,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು, ಭಾರತದಲ್ಲಿ ಮೂಳೆ ಚಿಕಿತ್ಸೆಯು ಹೇಗೆ ಆಧುನಿಕ ತಂತ್ರಜ್ಞಾನದೊಂದಿಗೆ ರೂಪಾಂತರಗೊಳ್ಳುತ್ತಿದೆ ಎಂಬುದನ್ನು ತೋರಿಸಿಕೊಟ್ಟಿವೆ.

Exit mobile version