ಕೊಡಗಿನಲ್ಲಿ ಒಮ್ಮೆಲೆ ತಾಪಮಾನ ಏರಿಕೆ
ತಣ್ಣನೆಯ ಕೂಲ್ ಕೂಲ್ ವೆದರ್ಗೆ ಹೆಸರಾಗಿದ್ದ ಕೊಡಗಿನಲ್ಲಿ ಇದೀಗ ಬಿಸಿಲಿನ ಧಗೆ ಶುರುವಾಗಿದೆ. ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬಿಸಿಲು ಬೆವರಿಳಿಸುತ್ತಿದೆ. ಈ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದ್ದು, ತಾಪಮಾನವೂ ಏರಿಕೆಯಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಇನ್ನೂ ಬೇಸಿಗೆಯ ಹೊಸ್ತಿಲಲ್ಲಿರುವಾಗಲೇ ಕೊಡಗು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಬೆವರಿಳಿಸುತ್ತಿದೆ. ಸದಾ ತಂಪಾಗಿರುವ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಬಿಸಿಲಿನಿಂದ ರಕ್ಷಣೆ ಹೇಗೆಂಬ ಚಿಂತೆ ಚಳಿನಾಡ ಜನರನ್ನು ಕಾಡಲಾರಂಭಿಸಿದೆ. ಸಾಮಾನ್ಯವಾಗಿ ತಂಪು ಹವಾಮಾನಕ್ಕೆ ಪ್ರಸಿದ್ಧವಾಗಿರುವ ಈ ಬೆಟ್ಟನಾಡಿನಲ್ಲಿ ಚಳಿಯಿಂದ ಒಮ್ಮೆಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಪರಿಸರ ಹಾಗೂ ಆರೋಗ್ಯ ಎರಡಕ್ಕೂ ಎಚ್ಚರಿಕೆಯ ಗಂಟೆ ಮೊಳಗಿಸಿದೆ.
ಚಳಿ ನೆಲೆದಲ್ಲೇ ಬಿಸಿಲಿನ ಕಾವು!
ಇನ್ನೂ ಫೆಬ್ರವರಿ ದ್ವಿತೀಯಾರ್ಧದಲ್ಲಿದ್ದೇವೆ ಆಗಲೇ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಭಾಗಗಳಲ್ಲಿ ಮಧ್ಯಾಹ್ನದ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬೆಳಗ್ಗೆ-ಸಂಜೆ ಸ್ವಲ್ಪ ತಂಪು ಉಳಿದಿದ್ದರೂ ಮಧ್ಯಾಹ್ನದ ಬಿಸಿಲು ದೇಹಕ್ಕೆ ತೀವ್ರವಾಗಿ ತಟ್ಟುತ್ತಿದೆ. ಇತ್ತೀಚೆಗೆ ತೀವ್ರ ಚಳಿಯಿಂದ ಕೂಡಿದ್ದ ವಾತಾವರಣದಲ್ಲಿ ದಿಢೀರ್ ತಾಪಮಾನ ಏರಿಕೆ ಆತಂಕ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕೊಡಗಿನಂತೆ ಎತ್ತರ ಪ್ರದೇಶದಲ್ಲೇ ಈ ಮಟ್ಟದ ಉಷ್ಣತೆ ಕಂಡುಬರುವುದು ಮುಂದಿನ ತಿಂಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾಗುವ ಸೂಚನೆ ಎಂದೂ ಹೇಳಲಾಗುತ್ತಿದೆ. ಹವಾಮಾನ ತಜ್ಞರ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಮಳೆ ಕೊರತೆ, ಮೋಡ ಕವಿದ ದಿನಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೂ ಗಾಳಿಯ ತೇವಾಂಶ ಕುಸಿತ ಇವೆಲ್ಲವೂ ತಾಪಮಾನ ಏರಿಕೆಗೆ ಕಾರಣವಾಗಿವೆ.
ಅಲ್ಲದೇ ಈ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದ್ದು, ತಾಪಮಾನವೂ ಏರಿಕೆಯಾಗಲಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿಸಾಮಾನ್ಯವಾಗಿ ತಾಪಮಾನ ಇನ್ನೂ 2 – 3 ಡಿಗ್ರಿ ಏರಿಕೆಯಾಗುವ ಸಂಭವವಿದೆ. ಪ್ರೀ-ಮಾನ್ಸೂನ್ ಮಳೆ ವಿಳಂಬವಾದರೆ ಬಿಸಿಲಿನ ತೀವ್ರತೆ ಹೆಚ್ಚಾಗಬಹುದು.
ಆರೋಗ್ಯದ ಮೇಲೆ ಬಿಸಿಲಿನ ಪರಿಣಾಮ :
ಇದ್ದಕ್ಕಿದ್ದಂತೆ ಉಷ್ಣತೆ ಏರಿಕೆ ಆಗಿರುವುದು ದೇಹಕ್ಕೆ ಹಲವು ರೀತಿಯಲ್ಲಿಪರಿಣಾಮ ಬೀರುತ್ತದೆ. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಹೊರಾಂಗಣದಲ್ಲಿಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವೈದ್ಯರು.
ಕೃಪೆ : ವಿಜಯ ಕರ್ನಾಟಕ


