ಕೊಡಗಿನ ಬಹುತೇಕ ರಸ್ತೆಗಳು ನಮ್ಮ ನೆಚ್ಚಿನ ಎಂ.ಎಲ್.ಎ.ಗಳ ಕೃಪೆಯಿಂದ ನಳನಲಿಸುತ್ತಿವೆ
ಆದರೆ ಮಡಿಕೇರಿ–ಸಿದ್ದಾಪುರ ರಸ್ತೆ ಜನರೇನು ಚಿಕ್ಕವ್ವನ ಮಕ್ಕಳೇ?
✍️ಪಪ್ಪು ತಿಮ್ಮಯ್ಯ
ಚೆಟ್ಟಳ್ಳಿ
ಮಡಿಕೇರಿ–ಸಿದ್ದಾಪುರ ರಸ್ತೆಯ ಸ್ಥಿತಿ ಇಂದು ಅತ್ಯಂತ ದಯನೀಯ ಮಟ್ಟ ತಲುಪಿದೆ. ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಈ ರಸ್ತೆಗೆ ಡಾಮರೀಕರಣದ ಭಾಗ್ಯ ದೊರೆತಿಲ್ಲ. ಕತ್ತಲೆಕಾಡು–ಚೆಟ್ಟಳ್ಳಿ ಮಾರ್ಗವಾಗಿ ಸಾಗುವ ಈ ರಸ್ತೆ ದಿನನಿತ್ಯ ನೂರಾರು ಸಾರ್ವಜನಿಕರ ಜೀವನಾಡಿಯಾಗಿದೆ. ಶಾಲಾ ಮಕ್ಕಳು, ವೃದ್ಧರು, ರೋಗಗ್ರಸ್ತರು, ಸರ್ಕಾರಿ ನೌಕರರು ಹಾಗೂ ಪ್ರವಾಸಿಗರು ಈ ರಸ್ತೆಯನ್ನೇ ಅವಲಂಬಿಸಿಕೊಂಡು ಸಂಚರಿಸುತ್ತಿದ್ದಾರೆ.
ಆದರೆ ರಸ್ತೆ ಎನ್ನುವ ಹೆಸರಿಗಿಂತ ಇದು ಅಪಘಾತಗಳ ಹಾದಿಯಾಗಿ ಮಾರ್ಪಟ್ಟಿದೆ. ಗುಂಡಿ–ಗುಂಡಿಗಳು, ಮಣ್ಣು, ಧೂಳು, ಮಳೆಯಾದರೆ ಕೆಸರು—ಒಟ್ಟಿನಲ್ಲಿ ಜನಸಾಮಾನ್ಯರ ಸಹನೆಗೆ ಸವಾಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ, ಇದುವರೆಗೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ರಸ್ತೆಯ ದುಸ್ಥಿತಿಯತ್ತ ತಿರುಗಿ ನೋಡಿರುವ ಉದಾಹರಣೆ ಕಾಣಿಸುವುದಿಲ್ಲ.
ಹೀಗಾದರೆ ಈ ಭಾಗದ ಜನರು ಕೇಳುವ ಪ್ರಶ್ನೆಗಳು ಸಹಜವೇ:
“ನಾವೇನು ಮತ ಹಾಕಿಲ್ಲವೇ?”
“ನಾವೇನು ಕೊಡಗಿನವರಲ್ಲವೇ? ಕರ್ನಾಟಕದವರಲ್ಲವೇ?”
“ನಾವೇನು ಚಿಕ್ಕವ್ವನ ಮಕ್ಕಳೇ?”
ಸರಕಾರಗಳು ಬದಲಾಗಿವೆ, ಭರವಸೆಗಳು ಕೇಳಿಬಂದಿವೆ. ಆದರೆ ಈ ರಸ್ತೆ ಮಾತ್ರ ಹಾಗೆಯೇ ಉಳಿದಿದೆ. ಅಭಿವೃದ್ಧಿ ಎಂಬುದು ಕೇವಲ ಘೋಷಣೆಯಲ್ಲ; ಅದು ನೆಲಮಟ್ಟದಲ್ಲಿ ಕಾಣಿಸಬೇಕು. ಜನರ ತೆರಿಗೆಯ ಹಣದಿಂದ ನಿರ್ಮಾಣವಾಗಬೇಕಾದ ಮೂಲಸೌಕರ್ಯಗಳಿಗೆ ಇಂತಹ ನಿರ್ಲಕ್ಷ್ಯ ಮುಂದುವರಿದರೆ, ಜನತಂತ್ರದ ಮೇಲಿನ ನಂಬಿಕೆ ಸಾರ್ವಜನಿಕ ವಲಯದಲ್ಲಿ ಕುಸಿಯುವ ಅಪಾಯವಿದೆ.
ಸಂಬಂಧಪಟ್ಟ ಇಲಾಖೆಗಳು, ಶಾಸಕರು ಹಾಗೂ ಜಿಲ್ಲಾಡಳಿತ ಕೂಡಲೇ ಈ ರಸ್ತೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಇದು ಬೇಡಿಕೆಯಲ್ಲ—ಹಕ್ಕು.
✍️ಪಪ್ಪು ತಿಮ್ಮಯ್ಯ
ಚೆಟ್ಟಳ್ಳಿ



