ಹುಣ್ಣಿಮೆಯ ಅಂಗವಾಗಿ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ ನಾಪೋಕ್ಲು ಪಂಚಾಯತ್ ಹಾಗೂ ಧರ್ಮಸ್ಥಳ ಸಂಘದಿಂದ ಮಹಾಆರತಿ ಕಾರ್ಯಕ್ರಮ

ವರದಿ:ಝಕರಿಯ

ನಾಪೋಕ್ಲು : ಹುಣ್ಣಿಮೆಯ ಅಂಗವಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ವತಿಯಿಂದ ನಾಪೋಕ್ಲುವಿನಲ್ಲಿ ಜೀವನದಿ ಕಾವೇರಿಗೆ 181ನೇ ಮಹಾ ಆರತಿಯನ್ನು ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು.

ನಾಪೋಕ್ಲು ಸಮೀಪದ ಕೊಟ್ಟಮುಡಿ ಸೇತುವೆ ಬಳಿಯ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯೋಜಿತ ಕಾರ್ಯಕ್ರಮ ದಲ್ಲಿ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಧರ್ಮಸ್ಥಳ ಸಂಘದ ನಾಪೋಕ್ಲು ಸುಭಾಷ್ ನಗರ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಬಿ. ಎಂ. ಪ್ರತೀಪ್ ಅವರುಗಳು ಮಾತನಾಡಿ ಕಾವೇರಿ ತಾಯಿಯ ಮಣ್ಣಿನಲ್ಲಿ ಹುಟ್ಟಿರುವುದು ನಮ್ಮಪುಣ್ಯ. ಕಾವೇರಿ ಬ್ರಹ್ಮಗಿರಿಯಲ್ಲಿ ಹುಟ್ಟಿ ಕರ್ನಾಟಕದ ಜೀವನದಿಯಾಗಿ ನಾಲಕ್ಕು ರಾಜ್ಯಗಳ ಜನರಿಗೆ ನೀರನ್ನು ನೀಡುತ್ತಿದ್ದಾಳೆ. ನಮ್ಮ ಜೀವನದಿ ಕಾವೇರಿಯನ್ನು ಸಂರಕ್ಷಣೆ ಮಾಡುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಉತ್ತರ ಭಾರತದಲ್ಲಿರುವ ಗಂಗಾನದಿಯಂತೆ ಅಭಿವೃದ್ಧಿಪಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಉಮಾ ಲಕ್ಷ್ಮಿ, ಒಕ್ಕೂಟದ ಪದಾಧಿಕಾರಿ ಸ್ವಪ್ನ, ನವಜೀವನ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

Exit mobile version