
ಕುಶಾಲನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ ಮಾನವ ಸಂಘರ್ಷ ಹಾಗೂ ವನ್ಯ ಜೀವಿಗಳ ಉಪಟಳ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಉಪಾಯಗಳ ಜೊತೆಗೆ ಕಾರ್ಮಿಕರು ಮತ್ತು ಅರಣ್ಯದಂಚಿನ ಜನರು ವನ್ಯ ಜೀವಿಗಳ ಜೊತೆ ಹೇಗೆ ಬದುಕಬೇಕೆಂಬ ಅರಿವು ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ರೂಪಿಸಬೇಕೆಂದು ಉದ್ಯಮಿ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಅತಿಯಾದ ಆನೆ ಮಾನವ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ ಮುದ್ದಪ್ಪ “ಆನೆಗಳನ್ನು ಶಾಶ್ವತವಾಗಿ ಓಡಿಸಲು ಸಾಧ್ಯವಿಲ್ಲ. ಪ್ರತಿದಿನ ಕಾಡಾನೆಗಳು ಕನಿಷ್ಠ 30 ರಿಂದ 40 ಕಿಮಿ ವರೆಗೂ ಸಂಚರಿಸುತ್ತವೆ. ವನ್ಯಜೀವಿಗಳು ತೋಟ ಮತ್ತು ಅರಣ್ಯದೊಳಗೆ ಸರಾಗವಾಗಿ ಸಂಚರಿಸುವ ಮನಸ್ಥಿಯನ್ನು ಹೊಂದಿದೆ. ಅದರ ಇರುವಿಕೆಯ ಸುಳಿವು ಇಲ್ಲದ ಕಾರಣ ನೂರಾರು ಕಾರ್ಮಿಕರು ಇಲ್ಲಿವರೆಗೆ ಸಾವನ್ನಪ್ಪಿದ್ದಾರೆ, ಪ್ರತಿಭಟನೆಗಳು ಮತ್ತು ಘಟನೆಯ ಬಳಿಕದ ಪ್ರತಿಕ್ರಿಯೆಗಳಿಂದ ಇಲ್ಲಿ ಸಮಸ್ಯೆ ಪರಿಹಾರ ಅಸಾಧ್ಯ. ಇಲ್ಲಿ ಈಗಿನ ವೈಜ್ಞಾನಿಕ ಉಪಾಯಗಳ ಮೂಲಕವಷ್ಟೇ ಪರಿಹಾರದ ಅನಿವಾರ್ಯತೆ ಇದೆ. ಅರಣ್ಯ ಇಲಾಖೆ ಕಾಫಿ ತೋಟಗಳಲ್ಲಿ ಸೋಲಾರ್ ಕ್ಯಾಮೆರಾಗಳನ್ನು ಅಳವಡಿಸಿ ಅದರ ಆಕ್ಸೆಸ್ ಗಳನ್ನು ತೋಟದ ಮಾಲೀಕ ಅಥವಾ ನಿರ್ವಾಹಕರಿಗೆ ನೀಡಬೇಕು. ಹ್ಯೂಮನ್ ಮೂವೆಂಟ್ ಆದಾಗ ಅಲರ್ಟ್ ಸಂದೇಶಗಳು ಬರುತ್ತದೆ. ಸಂದೇಶ ಬಂದರೆ ಪ್ರಾಣಿಗಳು ತೋಟವನ್ನು ಪ್ರವೇಶಿಸಿದೆಯೇ ಎಂದು ಖಾತರಿಪಡಿಸಿಕೊಂಡು ಕಾರ್ಮಿಕರಿಗೆ ಎಚ್ಚರಿಸಬೇಕು. ಹೆಚ್ಚು ಕಾರ್ಮಿಕರೇ ಸಾವನ್ನಪ್ಪುತ್ತಿರುವುದರಿಂದ ಕಾರ್ಮಿಕ ಇಲಾಖೆಯ ಈ ಬಗ್ಗೆ ಗಮನಹರಿಸಬೇಕಿದೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಒಟ್ಟಾಗಿ ಕಾರ್ಮಿಕರು ಮತ್ತು ಅರಣ್ಯದಂಚಿನ ಜನರು ವನ್ಯ ಜೀವಿಗಳು ತೋಟ ಮತ್ತು ತಮ್ಮ ವ್ಯಾಪ್ತಿಯ ಸುತ್ತ ಮುತ್ತಲ ಇರುವಿಕೆಯನ್ನು ಅರಿಯಲು ವೈಜ್ಞಾನಿಕ ಅರಿವು ಕಾರ್ಯಕ್ರಮಗಳ ಅವಶ್ಯಕತೆ ಇದೆ” ಎಂದು ನಾಪಂಡ ಮುದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.ಕಾಡಾನೆ ಮಾನವ ಸಂಘರ್ಷದಲ್ಲಿ ಜನರು ವನ್ಯಜೀವಿಗಳ ಇರುವಿಕೆ ಅರಿತು ಬದುಕುವುದನ್ನು ಕಲಿಯುವ ಅವಶ್ಯಕತೆ ಇದೆ ಅಂದು ನಾಪಂಡ ಮುದ್ದ ಅಭಿಪ್ರಾಯಪಟ್ಟಿದ್ದಾರೆ.

