ಸುರೇಶ್ ಬಿಳಿಗೇರಿ

ಮಡಿಕೇರಿ: ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದಿಂದ ಮಾಕುಟ್ಟ ಮಾರ್ಗವಾಗಿ ಕರ್ನಾಟಕಕ್ಕೆ ಪ್ರತಿದಿನ ಸುಮಾರು 40 ರಿಂದ 55 ಲಾರಿಗಳಲ್ಲಿ ‘ಚೆತ್ತು ಕಲ್ಲು’ ಸಾಗಾಟವಾಗುತ್ತಿದೆ ಎಂಬ ಆರೋಪದ ನಡುವೆ, ಈ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ ಎನ್ನಲಾದ ನಿಗೂಢ ಹಣದ ವಸೂಲಿಯೇ ಈಗ ಕೊಡಗಿನ ಚರ್ಚೆಯ ಕೇಂದ್ರಬಿಂದುವಾಗಿದೆ.

ಮೂಲಗಳ ಪ್ರಕಾರ, ಕೇರಳದಿಂದ ಈ ರೀತಿಯ ಕಲ್ಲುಗಳನ್ನು ಕರ್ನಾಟಕಕ್ಕೆ ಸಾಗಿಸಲು ಕಾನೂನಾತ್ಮಕವಾಗಿ ನಿರ್ಬಂಧಗಳಿವೆ. ಆದರೆ ಮನೆ ನಿರ್ಮಾಣ ಸೇರಿದಂತೆ ಸ್ಥಳೀಯ ಕಟ್ಟಡ ನಿರ್ಮಾಣಗಳ ಅಗತ್ಯಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ, ಯಾವುದೇ ಲಿಖಿತ ಆದೇಶವಿಲ್ಲದೆ ಒಂದು ರೀತಿಯ ಮೌಖಿಕ ಒಪ್ಪಂದದ ಆಧಾರದಲ್ಲಿ ವಾಹನಗಳ ಸಂಚಾರಕ್ಕೆ ಈ ಹಿಂದೆಯಿಂದಲೂ ಅವಕಾಶ ಕಲ್ಪಿಸಲಾಗುತ್ತಿತ್ತು ಎಂಬುವುದು ಸತ್ಯ.

ಆದರೆ ಇದರ ಹಿಂದೆ ಹಣದ ವಸೂಲಿಯ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದಿನಿಂದಲೂ ಪ್ರತಿ ಲಾರಿಗೆ ನಿಗದಿತ ಮೊತ್ತವನ್ನು ಪಡೆಯಲಾಗುತ್ತಿತ್ತು ಎಂಬ ಆರೋಪಗಳಿದ್ದು, ತಿಂಗಳಿಗೆ ಒಂದು ಲಾರಿಗೆ ಸುಮಾರು ₹5,500 ನೀಡಬೇಕೆಂಬ ‘ಅಲಿಖಿತ ನಿಯಮ’ ಜಾರಿಯಲ್ಲಿತ್ತು ಎನ್ನಲಾಗಿದೆ. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ಸುಮಾರು ₹3,000 ಸೇರಿಸಿ ₹8,500ಕ್ಕೆ ಏರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದು ಹೆಚ್ಚುವರಿ ಮಾಡಿದ್ಯಾರು ಎಂಬುವುದು ನಿಗೂಢ.

ಆದರೆ ಲಾರಿ ಚಾಲಕರಿಂದ ಹಣವನ್ನು ಯಾರು ಸಂಗ್ರಹಿಸುತ್ತಾರೆ? ಯಾರಿಗೆ ತಲುಪಿಸುತ್ತಾರೆ? ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇದುವರೆಗೂ ಸ್ಪಷ್ಟ ಅಲ್ಲ ಉತ್ತರವೇ ಸಿಕ್ಕಿಲ್ಲ.

ಕೆಲವರು ಈ ಹಣ ಆಡಳಿತ ಪಕ್ಷದ ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈ ಸೇರುತ್ತದೆ ಎಂದು ಆರೋಪಿಸಿದರೆ, ಇನ್ನೂ ಕೆಲವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಹಂತಗಳಿಗೆ ಹಂಚಿಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಆರೋಪಗಳಿಗೆ ಅಧಿಕೃತ ದಾಖಲೆ ಅಥವಾ ದೃಢೀಕರಣ ಯಾವುದು ಸದ್ಯಕ್ಕಿಲ್ಲ.

ಇದೇ ವಿಚಾರ ಸ್ಥಳೀಯ ಜನಪ್ರತಿನಿಧಿಗಳ ಹೆಸರಿಗೂ ಕಳಂಕ ತರುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರೊಬ್ಬರು ಪೆರುಂಬಾಡಿ ಚೆಕ್‌ಪೋಸ್ಟ್‌ಗೆ ತೆರಳಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. “ನಿಮ್ಮ ನಡೆ-ನುಡಿಯಿಂದ ನಮ್ಮ ಶಾಸಕರ ಹೆಸರೇ ಹಾಳಾಗುತ್ತಿದೆ” ಎಂದು ಎಚ್ಚರಿಕೆ ನೀಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ನೀವು ಪಡೆಯುವ ಹಣದಿಂದ ನಮಗೆ ಸಾಮಾನ್ಯರು ಕಿರಿ ಕಿರಿ ಮಾಡುತ್ತಾರೆ” ಎಂದು ಚೆಕ್ಪೋಸ್ಟ್ ನಲ್ಲಿ ಸಣ್ಣ ರಂಪಾಟವೂ ಆಗಿತ್ತು..

ಈ ಹಿಂದೆ ಸುಮಾರು ₹45ಕ್ಕೆ ದೊರೆಯುತ್ತಿದ್ದ ಇಟ್ಟಿಗೆಯ ಬೆಲೆ ಏಕಾಏಕಿ ₹62ಕ್ಕೆ ಏರಿಕೆಯಾಗಿದೆ. ಅನಧಿಕೃತ ವಸೂಲಿ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವೇ ಬೆಲೆ ಏರಿಕೆಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಅಂತಿಮವಾಗಿ ಇದರ ಹೊರೆ ಮನೆ ಕಟ್ಟುವ ಸಾಮಾನ್ಯ ಜನರ ಮೇಲೆಯೇ ಬೀಳುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿ ಮತ್ತೊಂದು ಮಹತ್ವದ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಇದ್ದರೂ, ಕಾನೂನುಬದ್ಧವಾಗಿ ಸಾಗುತ್ತಿರುವ ಅಥವಾ ಸಾಗಾಟಕ್ಕೆ ಅವಕಾಶ ನೀಡಲಾಗಿರುವ ವಾಹನಗಳನ್ನು ತಡೆಯುವ ಅಧಿಕಾರ ಸಾರ್ವಜನಿಕರಿಗೆ ಯಾರು ನೀಡಿದ್ದು? ಅಧಿಕಾರಿಗಳ ತಪ್ಪಿದ್ದರೆ ಅವರದೇ ಸರಕಾರ ಇರುವಾಗ ಕ್ರಮ ಜರುಗಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ಇಲ್ಲಿ ಕೇಳಿ ಬಂದಿದೆ. ಪಕ್ಷದ ಮುಖಂಡರೊಬ್ಬರು ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ವ್ಯವಸ್ಥೆಗೆ ಅನುಮತಿ ನೀಡಿದವರು ಯಾರು?

ಒಂದು ಕಡೆ ಇದನ್ನು “ಕಲೆಕ್ಷನ್ ಪಾಯಿಂಟ್” ಎಂದು ಕರೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಸಾರ್ವಜನಿಕವಾಗಿ ವಾಹನಗಳನ್ನು ತಡೆದು ಹಣ ಪಡೆಯುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಮನೆ ಕಟ್ಟುವ ಜನರ ಅನುಕೂಲಕ್ಕಾಗಿ ಆರಂಭವಾಯಿತು ಎನ್ನಲಾಗುತ್ತಿರುವ ಮೌಖಿಕ ವ್ಯವಸ್ಥೆ, ಇಂದು ಯಾರ ನಿಯಂತ್ರಣದಲ್ಲಿ ಇದೆ? ಪ್ರತಿ ಲಾರಿಗೆ ವಸೂಲಾಗುತ್ತಿದೆ ಎನ್ನಲಾದ ಸಾವಿರಾರು ರೂಪಾಯಿ ಎಲ್ಲಿಗೆ ಹೋಗುತ್ತಿದೆ? ಈ ಹಣದ ಲೆಕ್ಕ ಯಾರ ಬಳಿ ಇದೆ?

ಪೆರುಂಬಾಡಿ ಚೆಕ್‌ಪೋಸ್ಟ್ ಗಲಾಟೆ ಕೇವಲ ಒಂದು ದಿನದ ವಾಗ್ವಾದವಲ್ಲ. ಇದರ ಹಿಂದೆ ಅಕ್ರಮ ಸಾಗಾಟದ ಅನುಮಾನ, ಅಲಿಖಿತ ಒಪ್ಪಂದ, ನಿಗೂಢ ಹಣದ ವಸೂಲಿ ಮತ್ತು ರಾಜಕೀಯ ಆರೋಪಗಳ ದೊಡ್ಡ ಜಾಲವೇ ಅಡಗಿದೆಯೇ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಉತ್ತರ ನೀಡಬೇಕಾಗಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಅವರು ಡಿವೈಎಸ್pಪಿ ನೇತೃತ್ವದಲ್ಲಿ ತನಿಖೆ ನಡೆಸಿ ಏಳು ದಿನದ ಒಳಗಾಗಿ ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದು ಯಾರು ತಪ್ಪಿತಸ್ಥರು ಎಂದು ಕಾಯಬೇಕಿದೆ.

Exit mobile version