ಟಿಕೆಟ್ ರಾಜಕೀಯ ಮರೆತು ಪಕ್ಷಕ್ಕಾಗಿ ನಿಲ್ಲಬೇಕಿತ್ತು; ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಬೇಸರ

ಎಸ್ ಬಿ. 

ಮಡಿಕೇರಿ: ಕೊಡಗಿನಲ್ಲಿ ಆನೆ–ಮಾನವ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ನಡೆದ ಮಹತ್ವದ ಸಭೆ ಇದೀಗ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ಬಿಜೆಪಿ ವಕ್ತಾರ ರವಿ ಕುಶಾಲಪ್ಪ ಅವರ ನಡುವೆ ಬೆಳೆಗಾರರ ಸಮಸ್ಯೆ ಮತ್ತು ಬೆಳೆನಷ್ಟ ಪರಿಹಾರದ ವಿಚಾರವಾಗಿ ನಡೆದ ತೀವ್ರ ಮಾತಿನ ಚಕಮಕಿ ಸದ್ಯ ಸುದ್ದಿಯಲ್ಲಿದೆ.

ವೇದಿಕೆಯಲ್ಲಿ ಬಿಜೆಪಿ ಹಿರಿಯ ನಾಯಕರು ಹಾಗೂ ಪ್ರಮುಖ ಮುಖಂಡರಾದ ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರೂ, ಕಾಂಗ್ರೆಸ್ ನಾಯಕರ ವಿರುದ್ಧದ ವಾಗ್ವಾದದಲ್ಲಿ ರವಿ ಕುಶಾಲಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವ ಪ್ರಯತ್ನ ಕಾಣಿಸಲಿಲ್ಲ ಎಂಬ ಚರ್ಚೆ ಇದೀಗ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

ಬೆಳೆಗಾರರ ಸಂಕಷ್ಟ, ಬೆಳೆನಷ್ಟ ಪರಿಹಾರ ಹಾಗೂ ಸರ್ಕಾರದ ವೈಫಲ್ಯದ ವಿಚಾರದಲ್ಲಿ ಕಾಂಗ್ರೆಸ್ ಬಳಗವನ್ನು ಏಕಾಂಗಿಯಾಗಿ ಎದುರಿಸಿದಂತೆ ಕಂಡ ರವಿ ಕುಶಾಲಪ್ಪ ಅವರ ನಿಲುವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಪಕ್ಷದಲ್ಲಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಬೇರೆ ವಿಚಾರ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ಪರವಾಗಿ ಧ್ವನಿ ಎತ್ತುವ ನಾಯಕನ ಬೆನ್ನಿಗೆ ನಿಲ್ಲುವುದು ಸಂಘಟನೆಯ ಜವಾಬ್ದಾರಿಯಲ್ಲವೇ?” ಎಂಬ ಪ್ರಶ್ನೆಯನ್ನು ಬಿಜೆಪಿ ಕಾರ್ಯಕರ್ತರೇ ಕೇಳುತ್ತಿರುವುದು ಸಾಮಾನ್ಯವಾಗಿದೆ.

ಕಳೆದ ಕೆಲ ದಿನಗಳಿಂದ ಕೊಡಗಿನ ರಸ್ತೆ ಸಮಸ್ಯೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿರುವ ರವಿ ಕುಶಾಲಪ್ಪ, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂಬ ಭಾವನೆ ಮೂಡಿದ್ದ ಸಂದರ್ಭದಲ್ಲೇ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಒಂದು ಕಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾದ ಸಂದರ್ಭದಲ್ಲೇ ಬಿಜೆಪಿ ನಾಯಕತ್ವದೊಳಗಿನ ಒಗ್ಗಟ್ಟಿನ ಕೊರತೆ ಬಹಿರಂಗವಾಗುತ್ತಿದೆಯೇ ಎಂಬ ಪ್ರಶ್ನೆ  ಸಾಮಾನ್ಯವಾಗಿ ಜನಸಾಮಾನ್ಯರಲ್ಲೂ ಮೂಡಿದೆ. ಪ್ರಮುಖ ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ವಕ್ತಾರನೊಬ್ಬ ಏಕಾಂಗಿಯಾಗಿ ಕಾಂಗ್ರೆಸ್ ಬಳಗವನ್ನು ಎದುರಿಸುತ್ತಿದ್ದಾಗ, ಉಳಿದ ನಾಯಕರು ಮೌನಕ್ಕೆ ಶರಣಾಗಿದ್ದು ಏಕೆ ಎಂಬ ಪ್ರಶ್ನೆಗೆ ಬಿಜೆಪಿ ನಾಯಕತ್ವ ಉತ್ತರಿಸಬೇಕಿದೆ ಎಂದು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

“ವೈಯಕ್ತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪಕ್ಷದ ವಿಚಾರ ಬಂದಾಗ ಒಗ್ಗಟ್ಟಿನಿಂದ ನಿಲ್ಲಬೇಕು. ಪಕ್ಷದ ಪರವಾಗಿ ಮಾತನಾಡುವವರಿಗೆ ಸಾಥ್ ನೀಡಬೇಕು. ಇಲ್ಲವಾದರೆ ಕಾರ್ಯಕರ್ತರಲ್ಲಿ ಯಾವ ಸಂದೇಶ ಹೋಗುತ್ತದೆ?” ಎಂಬ ಬೇಸರ ಬಿಜೆಪಿ ಕಾರ್ಯಕರ್ತರಲ್ಲೇ ವ್ಯಕ್ತವಾಗುತ್ತಿದೆ.

ಕೊಡಗಿನಲ್ಲಿ ವಿರೋಧ ಪಕ್ಷದ ಧ್ವನಿ ಕ್ಷೀಣಿಸುತ್ತಿದೆ ಎಂಬ ಆರೋಪಗಳ ನಡುವೆ, ಸರ್ಕಾರದ ವಿರುದ್ಧ ನಿರಂತರವಾಗಿ ಪ್ರಶ್ನೆ ಎತ್ತುತ್ತಿರುವ ಕೆಲವೇ ಕೆಲವು ನಾಯಕರಲ್ಲಿ ರವಿ ಕುಶಾಲಪ್ಪ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಪಕ್ಷದ ಇತರ ಹಿರಿಯ ನಾಯಕರು ಮೌನವಾಗಿರುವುದು ಬಿಜೆಪಿ ಸಂಘಟನೆಗೆ ಯಾವ ಸಂದೇಶ ನೀಡುತ್ತದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಆನೆ–ಮಾನವ ಸಂಘರ್ಷದಂತಹ ಜನಜೀವನದ ಗಂಭೀರ ಸಮಸ್ಯೆಯ ಕುರಿತ ಸಭೆ ರಾಜಕೀಯ ವಾಗ್ವಾದಕ್ಕೆ ಸಾಕ್ಷಿಯಾದರೆ, ಆ ವಾಗ್ವಾದದಲ್ಲಿ ಪಕ್ಷದ ಪರವಾಗಿ ಧ್ವನಿ ಎತ್ತಿದ ನಾಯಕನಿಗೆ ಬೆಂಬಲ ನೀಡದಿರುವುದು ಬಿಜೆಪಿಯೊಳಗಿನ ಒಗ್ಗಟ್ಟಿನ ಕೊರತೆಯೇ? ಅಥವಾ ನಾಯಕತ್ವದ ನಡುವಿನ ಅಂತರದ ಪ್ರತಿಬಿಂಬವೇ? ಎಂಬ ಪ್ರಶ್ನೆ ಇದೀಗ ಕೊಡಗು ರಾಜಕೀಯದಲ್ಲಿ ಚರ್ಚೆಗೆ ಬಂದಿದೆ.

ಒಟ್ಟಾರೆ, ರವಿಕುಶಾಲಪ್ಪ ಅವರ ಏಕಾಂಗಿ ಹೋರಾಟದ ಚಿತ್ರಣ ಒಂದು ಕಡೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದರೆ, ಮತ್ತೊಂದೆಡೆ ಪಕ್ಷದ ಹಿರಿಯ ನಾಯಕರ ಮೌನ ಒಗ್ಗಟ್ಟಿನ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ವಿರುದ್ಧ ಹೋರಾಟಕ್ಕಿಂತ ಮೊದಲು ಬಿಜೆಪಿಯೊಳಗಿನ ನಾಯಕರು ಒಂದೇ ವೇದಿಕೆಯಲ್ಲಿ, ಒಂದೇ ಧ್ವನಿಯಲ್ಲಿ ನಿಲ್ಲುವ ಅಗತ್ಯವಿದೆ ಎಂಬ ಸಂದೇಶ ಈ ಘಟನೆಯಿಂದ ಹೊರಬಂದಿದೆ.

Exit mobile version