
ವಿರಾಜಪೇಟೆ: ರಾಜ್ಯದ ಹಿರಿಯ ರಾಜಕಾರಣಿ, ವಕೀಲ ಹಾಗೂ ಸಂವಿಧಾನ ತಜ್ಞರಾಗಿದ್ದ ದಿವಂಗತ ಎ.ಕೆ. ಸುಬ್ಬಯ್ಯ ಅವರ 7ನೇ ಪುಣ್ಯಸ್ಮರಣೆಯ ಅಂಗವಾಗಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ತಂದೆಯ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.
1980ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎ.ಕೆ. ಸುಬ್ಬಯ್ಯ ಅವರು 1983ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 18 ಅಭ್ಯರ್ಥಿಗಳು ಗೆಲುವು ಸಾಧಿಸಲು ಪ್ರಮುಖ ಕಾರಣಕರ್ತರಾಗಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ವಕೀಲರಾಗಿ, ಕಾನೂನು ಹಾಗೂ ಸಂವಿಧಾನ ತಜ್ಞರಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ತಂದೆಯ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಶಾಸಕ ಪೊನ್ನಣ್ಣ ಅವರು, ಬಳಿಕ ತಮ್ಮ ತಾಯಿಯವರ ಸಮಾಧಿಗೂ ಪುಷ್ಪನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರ ಹಿರಿಯ ಸಹೋದರ ಎ.ಎಸ್. ನರೇನ್ ಕಾರ್ಯಪ್ಪ, ದೊಡ್ಡಮ್ಮ ಗಂಗಮ್ಮ, ಅಜ್ಜಿಕುಟ್ಟಿರ ಗಿರೀಶ್, ಪ್ರಶಾಂತ್ ಪಮ್ಮು, ಪೊನ್ನಪ್ಪ, ಆದಿತ್ಯ ಪೆಮ್ಮಯ್ಯ, ಬಾಳೇಯಡ ಕರುಣ್ ಕಾಳಪ್ಪ ಸೇರಿದಂತೆ ಶಾಸಕರ ಸಿಬ್ಬಂದಿ ವರ್ಗ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



