ಜ್ಞಾನ ಜ್ಯೋತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪಮಿತಾ ಕೇಂದ್ರ ಸರ್ಕಾರದ ‘ಪ್ರೇರಣಾ’ ಕಾರ್ಯಕ್ರಮಕ್ಕೆ ಆಯ್ಕೆ

ಜ್ಞಾನ ಜ್ಯೋತಿ ಶಾಲೆಯ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಪಮಿತಾ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರತಿಷ್ಠಿತ ‘ಪ್ರೇರಣಾ’ (PRERANA) ಪ್ರಾಯೋಗಿಕ ಕಲಿಕಾ ಕಾರ್ಯಕ್ರಮಕ್ಕೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾಳೆ. ಈ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಪಮಿತಾ ಜುಲೈ 9ರಂದು ಪ್ರಯಾಣ ಬೆಳೆಸಲಿದ್ದಾಳೆ.
ದೇಶದ ಯುವ ಪೀಳಿಗೆಯಲ್ಲಿ ನಾಯಕತ್ವದ ಗುಣಗಳು, ದೇಶಭಕ್ತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಭಾರತ ಸರ್ಕಾರ ಜಾರಿಗೆ ತಂದಿರುವ ಈ ಕಾರ್ಯಕ್ರಮವು ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದೆ. ಜಿಲ್ಲಾ ಮಟ್ಟದಲ್ಲಿ ನಡೆದ ‘ಪ್ರೇರಣಾ ಉತ್ಸವ’ದ ಸ್ಪರ್ಧೆಗಳು, ವ್ಯಕ್ತಿತ್ವ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಮಿತಾ ಈ ಅಪೂರ್ವ ಅವಕಾಶವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಈ ಆಯ್ಕೆಯ ಮೂಲಕ ಪಮಿತಾ ಗುಜರಾತ್ನ ವಾಡ್ನಗರದಲ್ಲಿರುವ ಐತಿಹಾಸಿಕ ಶಾಲೆಯಲ್ಲಿ ನಡೆಯಲಿರುವ ಒಂದು ವಾರದ ಉಚಿತ ವಸತಿ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾಳೆ. ಅಲ್ಲಿ ಐಐಟಿ ಗಾಂಧಿನಗರ ಸಿದ್ಧಪಡಿಸಿರುವ ವಿಶೇಷ ಪಠ್ಯಕ್ರಮ, ಯೋಗ, ಆಧುನಿಕ ತಂತ್ರಜ್ಞಾನ ಹಾಗೂ ಭಾರತೀಯ ಜ್ಞಾನ ಪರಂಪರೆಯ ಕುರಿತು ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳೊಂದಿಗೆ ಜಂಟಿಯಾಗಿ ಕಲಿಯಲಿದ್ದಾಳೆ.
ವಿದ್ಯಾರ್ಥಿನಿ ಪಮಿತಾಳೊಂದಿಗೆ ಮಾರ್ಗದರ್ಶಕ ಶಿಕ್ಷಕಿಯಾಗಿ ಶ್ರೀಮತಿ ಬಿಂದು ಅವರು ಸಹ ಜುಲೈ 9ರಂದು ಪ್ರಯಾಣ ಬೆಳೆಸಲಿದ್ದು, ಕಾರ್ಯಕ್ರಮದ ಅವಧಿಯಲ್ಲಿ ಪಮಿತಾಳಿಗೆ ಮಾರ್ಗದರ್ಶನ ಮತ್ತು ಅಗತ್ಯ ಸಹಕಾರ ನೀಡಲಿದ್ದಾರೆ.
ಪಮಿತಾ ಅವರು ಕಾಂತುರು ನಿವಾಸಿಗಳಾದ ತಿರುಟೇರ ನಾಣಯ್ಯ ಹಾಗೂ ನೀತು ದಂಪತಿಗಳ ಪುತ್ರಿಯಾಗಿದ್ದಾರೆ.
10ನೇ ತರಗತಿಯಲ್ಲೇ ರಾಷ್ಟ್ರ ಮಟ್ಟದ ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪಮಿತಾಳ ಮಹೋನ್ನತ ಸಾಧನೆಗೆ ಜ್ಞಾನ ಜ್ಯೋತಿ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗವು ಹರ್ಷ ವ್ಯಕ್ತಪಡಿಸಿದ್ದು, ಪಮಿತಾಳ ಉಜ್ವಲ ಭವಿಷ್ಯ ಹಾಗೂ ಯಶಸ್ವಿ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ.

