ಕೊಡಗು ಸೈನಿಕ ಶಾಲೆಯಲ್ಲಿ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ ಸಮಾರೋಪ

ಕುಶಾಲನಗರ, ಜೂ.12: ‘ದೇಶಭಕ್ತಿ, ಪ್ರಾಮಾಣಿಕತೆ, ನಾಯಕತ್ವ ಗುಣ ಮತ್ತು ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಕೇರಳಂ ಮತ್ತು ತಮಿಳುನಾಡು ರಾಜ್ಯಗಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದರು.

ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ (ಪೂರ್ವ ಸುಬ್ರೊತೋ ಕಪ್ 2026) ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ಪದಕ, ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಯುವ ಫುಟ್‌ಬಾಲ್ ಆಟಗಾರರ ಶಿಸ್ತು, ಸಮರ್ಪಣೆ, ತಂಡದ ಮನೋಭಾವ ಮತ್ತು ಕ್ರೀಡಾ ಸ್ಫೂರ್ತಿಯನ್ನು ಪ್ರಶಂಸಿಸಿದ ರಾಜ್ಯಪಾಲರು ಸೈನಿಕ ಶಾಲೆ ಕೊಡಗು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದಿಸಿದರು. ಶಾಲೆಯ ಸಮಗ್ರ ಕಾರ್ಯಗಳನ್ನು ಶ್ಲಾಘಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್ ಒಡೆಯರ್ ಮಾತನಾಡಿ, ‘ದೇಶ ಸೇವೆ ಹಾಗೂ ನಾಯಕತ್ವಕ್ಕೆ ಬದ್ಧವಾದ ದೇಶಭಕ್ತ ಯುವಜನರನ್ನು ರೂಪಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು.

ನಂತರ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ‘ಪ್ರಸಕ್ತ ಜರುಗಿದ ಪಂದ್ಯಾವಳಿಯು ಶಾಲೆಯ ಇತಿಹಾಸದಲ್ಲಿಯೇ ಸ್ಮರಣೀಯ ಹಾಗೂ ಐತಿಹಾಸಿಕ ‘ ಎಂದು ಬಣ್ಣಿಸಿದರು.

ಶಾಲಾ ಆವರಣದ ವೀಕ್ಷಣಾ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯಪಾಲರು ಕೆ. ಎಂ. ಪಿ. ಸಭಾಂಗಣದಲ್ಲಿ ನವೀಕರಿಸಲಾದ ಶಾಲಾ ಜಿಮ್ ಅನ್ನು ಉದ್ಘಾಟಿಸಿದರು.

ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕೊಡಗು ಸೈನಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ: ಶ್ರೀಧರ್ ನಾರಾಯಣ್

Exit mobile version