ಇನ್ನೆಷ್ಟು ಇನ್ನೆಷ್ಟು ಬಾರಿ ಅಗಗೆಯುತ್ತೀರಿ? ಕುಶಾಲನಗರದ ನಾಗರಿಕರ
ಪ್ರಶ್ನೆಗೆ ಉತ್ತರಿಸುವವರಾರು?
ವರದಿ: ಶ್ರೀಧರ್ ನಾರಾಯಣ್
ಕುಶಾಲನಗರ : ಕಳೆದ 12 ವರ್ಷಗಳಿಂದ ಸಾಗುತ್ತಿದೆ ಒಂದು ಮಹತ್ವದ ಶತಕೋಟಿ ಹತ್ತಿರದ ಕಾಮಗಾರಿ. ಕುಶಾಲನಗರ ಜನರ ಅನುಕೂಲಕ್ಕೆ , ಉಪಯೋಗಕ್ಕೆ ಬೇಕಾಗಿದ್ದ ಈ ಕಾಮಗಾರಿ ಜನರ ನೆಮ್ಮದಿ ಕಸಿದುಕೊಂಡಿದೆ. ಊರಿನ ಎಲ್ಲಾ ಬಡಾವಣೆಯ ರಸ್ತೆಗಳು, ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ಯಾವುದೂ ಬಗಿಯದೆ ಬಾಕಿಯಾಗಿಲ್ಲ ಎನ್ನುವುದು ಹಳೆಯ ವಿಚಾರ.
ಕುಶಾಲನಗರದ ಹೃದಯ ಭಾಗವಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತದಲ್ಲಿ ಇಂದು ‘ಕೊಡಗು ನ್ಯೂಸ್’ ಕಣ್ಣಿಗೆ ಕಂಡಿದ್ದು ಸತತ ಮೂರು ಅಥವಾ ನಾಲ್ಕನೇ ಬಾರಿ ಒಂದೇ ಜಾಗದಲ್ಲಿ ಬಗೆಯುತ್ತಿರುವ ದೃಶ್ಯ. ಇದೇ ಜಾಗದಲ್ಲಿ ಕಳೆದ ಬಾರಿ ಶಾಸಕರು ಹೆದ್ದಾರಿ ಬಗೆದಿರುವುದನ್ನು ಕಂಡು ಸ್ಥಳಕ್ಕೆ ತೆರಳಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಸೂಚಿಸಿದ್ದರು.
ಶೀಘ್ರದಲ್ಲೇ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆಯಿರುವುದರಿಂದ ಸಾರ್ವಜನಿಕರು ಕಾಮಗಾರಿ ಸಂಬಂಧ ಪಟ್ಟವರಿಗೆ ಹಿಡಿ ಶಾಪ ಹಾಕುತ್ತಿರುವುದು ಮಾಧ್ಯಮಕ್ಕೆ ಕಂಡು ಬಂತು.

