ಬೆಂಬಲಿಗರಿಗೆ ಔತಣಕೂಟವೋ? ಇಲ್ಲ ಬಲಪ್ರದರ್ಶನವೋ?
ಮುತ್ತಪ್ಪ, ಮುದ್ದಪ್ಪ ಸಹೋದರರಿಂದ ಕಾರ್ಯಕರ್ತರಿಗೆ ಔತಣಕೂಟ ಆಯೋಜನೆ
ಕುಶಾಲನಗರ: ಕುಶಾಲನಗರ ಕೂಡಿಗೆಯಲ್ಲಿ ಮೇ 12 ರಂದು ನಡೆದ ಮುತ್ತಪ್ಪ ಹಾಗೂ ಮುದ್ದಪ್ಪ ಅಭಿಮಾನೋತ್ಸವ ಔತಣಕೂಟ ಹಲವು ಆಯಾಮಗಳಲ್ಲಿ ಚರ್ಚೆಗೊಳಪಟ್ಟಿದೆ. ಚುನಾವಣೆಯ ಬಳಿಕ ತಮ್ಮ ಬೆಂಬಲಿಗರಿಗಾಗಿ ನಾಪಂಡ ಸಹೋದರರು ಔತಣಕೂಟ ಆಯೋಜಿಸಿದ್ದರು. 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಬಲಿಗರು ಸಹೋದರರಿಗೆ ಅಭಿನಂದನೆ ಸಲ್ಲಿಸುವ ಮೂಲಕ ನಾವಿದ್ದೇವೆ ನಿಮ್ಮೊಂದಿಗೆ ಎಂಬ ಸಂದೇಶವನ್ನು ರವಾನಿಸುವಂತಿತ್ತು. ಇದೆಲ್ಲದರ ಮದ್ಯೆ ನಾಪಂಡ ಮುತ್ತಪ್ಪ ಅವರಿಗೆ ಸರಿಯಾದ ಸ್ಥಾನಮಾನ ನೀಡದೆ ಇರುವುದಕ್ಕೆ ಈ ಬೆಂಬಲಿಗರ ಸಭೆ ಎಂಬ ಬಲವಾದ ಮಾತುಗಳು ಕೇಳಿ ಬಂದಿವೆ. ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ನಾಪಂಡ ಮುತ್ತಪ್ಪ ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆಯೇ ಎಂಬ ಅಸಮಾಧಾನ ಕೂಡ ಈಗ ಮುತ್ತಪ್ಪ ಬೆಂಬಲಿಗರಿಂದ ವ್ಯಕ್ತವಾಗಿದೆ.
30 ವರ್ಷಗಳಿಂದ ತನ್ನದೇ ತಂಡ ಕಟ್ಟಿದ್ದ ನಾಪಂಡ ಸಹೋದರರು.
ಕಳೆದ 30 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಾಪಂಡ ಸಹೋದರರು ಅದರಲ್ಲೂ ನಾಪಂಡ ಮುತ್ತಪ್ಪ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು ಅಲ್ಲದೆ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ ತನ್ನ ಸ್ವಂತ ಬೆಂಬಲಿಗರ ತಂಡವನ್ನು ಕಟ್ಟಿಕೊಂಡು ಶಾಸಕ ಅಭ್ಯರ್ಥಿ ಸ್ಥಾನ ಪ್ರಮುಖ ಆಕಾಂಕ್ಷಿಯೂ ಆಗಿದ್ದರು. 2018 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿದ ಪ್ರಬಲ ಆಕಾಂಕ್ಷಿಯಾಗಿದ್ದರೂ ಕೂಡ ಮುತ್ತಪ್ಪ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಟಿಕೆಟ್ ನೀಡದ ಕಾಂಗ್ರೆಸ್ ಪಕ್ಷದ ವಿರುದ್ಧ ತೊಡೆತಟ್ಟಿ ನಿಂತಿದ್ದ ಮುತ್ತಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದೂ ಅಲ್ಲದೆ ತಮ್ಮ ಸಾವಿರಾರು ಬೆಂಬಲಿಗರ ಜೊತೆ ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದರು.
ಜಿಲ್ಲಾಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದಿದ್ದ ಹೈಕಮಾಂಡ್
2018 ಚುನಾವಣೆಯ ಸಂದರ್ಭ ರೆಬೆಲ್ ಆಗಿದ್ದ ಮುತ್ತಪ್ಪ ಅವರನ್ನು ಚುನಾವಣೆಯ ಬಳಿಕ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಬಿ ಫಾರ್ಮ್ ಪಡೆದುಕೊಂಡಿದ್ದ ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿಗೆ ಕಾರಂತರಗಳಿಂದ ಟಿಕೆಟ್ ಕೈತಪ್ಪಿದ ಕಾರಣ ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಲಾಯಿತಾದರೂ ಕೊನೆ ಕ್ಷಣದಲ್ಲಿ ಟಿಕೆಟ್ ಕೆ ಪಿ ಚಂದ್ರಕಲಾ ಪಾಲಾಯಿತು.
ಪಕ್ಷದಲ್ಲಿ ಗೌರವಯುತ ಸ್ಥಾನ ನೀಡಲು ಮೀನಾ ಮೇಷ
ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ ಪಕ್ಷದ ಮುಖಂಡರು ಚುನಾವಣೆಯ ಸೋಲಿನ ಬಳಿಕ ಮುತ್ತಪ್ಪ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಮೀನಮೇಷ ಎಣಿಸುಸುವಂತಾಯಿತು. ಚುನಾವಣೆ ಬಳಿಕದ ಸತತ ಮೂರು ವರ್ಷ ಹಲವಾರು ಬಾರಿ ಪಕ್ಷದ ನಾಯಕರಲ್ಲಿ ಉನ್ನತ ಹುದ್ದೆ ಕೇಳಿದರರೂ ಕೊಡಲೊಪ್ಪದ ಕಾಂಗ್ರೆಸ್ ಪಕ್ಷವನ್ನು ಕೊನೆಗೂ ಮುತ್ತಪ್ಪ ಹಾಗು ಮುದ್ದಪ್ಪ ಸಹೋದರರು ತ್ಯಜಿಸಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷ ಸೇರಿದ್ದರು.
ಚುನಾವಣೆ ಬಳಿಕ ಮತ್ತೆ ಮಾತೃಪಕ್ಷಕ್ಕೆ
2023 ರ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ನ ಹಿರಿಯ ಮುಖಂಡರ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಮಾತೃ ಪಕ್ಷ ಸೇರಿದ್ದ ನಾಪಂಡ ಮುತ್ತಪ್ಪ ರಾಜಕೀಯವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರ ಪ್ರಯತ್ನಿಸಿದ್ದಾರೆ. ಸದ್ಯ ತಮ್ಮ ಬೆಂಬಲಿಗರ ಸಭೆ ಕರೆದಿರುವ ಅವರು ಮುಂಬರುವ ಚುನಾವಣೆಗಳಲ್ಲಿ ಪಕ್ಷ ಪ್ರಾಮುಖ್ಯತೆ ನೀಡದೆ ಹೋದಲ್ಲಿ ಮುಂದೆ ಏನು ಮಾಡಬೇಕೆಂಬ ಅಚಲ ನಿರ್ಧಾರ ತೆಗೆದುಕೊಳ್ಳುವ ಸಾದ್ಯತೆಯೂ ಇದೆ.
ಬಿಜೆಪಿ ವಿರುದ್ಧ ದ್ವನಿ ಎತ್ತಿದ್ದ ಏಕೈಕ ವ್ಯಕ್ತಿ
2014 ರ ಲೋಕಸಭೆ ಚುನಾವಣೆಯ ನಂತರ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲು ಕಾಂಗ್ರೆಸ್ ಕಾರ್ಯಕರ್ತರು ಭಯಪಡುತ್ತಿದ್ದ ಕಾಲವದು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಟೀಕಿಸುವ ಕೆಲಸವನ್ನು ಸಮಾಜಿಕ ಜಾಲತಾಣಗಳ ಮೂಲಕ ಮುತ್ತಪ್ಪ ಹಾಗೂ ಮುದ್ದಪ್ಪ ಮಾಡಿದ್ದಂತೂ ಸತ್ಯ. ಎಡಪಂಥೀಯ ಮನಸ್ಥಿತಿ ಹಾಗೂ ಬಿಜೆಪಿಗರನ್ನು ಧೈರ್ಯವಾಗಿ ಪ್ರಶ್ನಿಸುವ ಮುತ್ತಪ್ಪ ಮುದ್ದಪ್ಪ ಸಹೋದರನ್ನು ಕಾಂಗ್ರೆಸ್ ಪಕ್ಷ ಯಾಕೆ ಇನ್ನು ಗುರುತಿಸಿಲ್ಲ ಅನ್ನುವುದು ಸಾವಿರಾರು ಮುತ್ತಪ್ಪ ಮುದ್ದಪ್ಪ ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.
ಎಮ್ಮೆಲ್ಸಿ ಮೇಲಿದೆಯೇ ಮುತ್ತಪ್ಪ ಕಣ್ಣು
ಈ ಬೆಳವಣಿಗೆಯ ಮದ್ಯೆ 2027 ರಲ್ಲಿ ಬರುವ ವಿಧಾನ ಪರಿಷತ್ ಚುನಾವಣೆಗೆ ಮುತ್ತಪ್ಪ ಕಾಂಗ್ರೆಸ್ ಪಕ್ಷದ ಪ್ರಬಲ ಏಕೈಕ ಆಕಾಂಕ್ಷಿ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಬೆಳವಣಿಗೆಗಳು ಇದಕ್ಕೆ ಪುಷ್ಟಿಕೊಡುವಂತಿದೆ. ಎಮ್ಮೆಲ್ಸಿ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರ ಆಪ್ತ ವಲಯ ಹೇಳಿಕೊಳ್ಳುತ್ತಿದ್ದು , ಬೆಂಬಲಿಗರ ಔತಣ ಕೂಟವನ್ನು ಯಾವ ದೃಷ್ಟಿಕೋನದಲ್ಲಿ ನೋಡಲಿದೆ ಎಂಬುವುದು ಕೂಡ ಕೂತೂಹಲ ಮೂಡಿಸಿದೆ.

