ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ- ಕಳೆದ ಸಾಲಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮನ್ಸೂರ್ ಗೆ ಸನ್ಮಾನ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಎಂ. ಎಸ್. ಶಿವಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಂಡು ಹಿರಿಯರಿಗೆ, ಶಿಕ್ಷಕರಿಗೆ ಗೌರವವನ್ನು ಕೊಟ್ಟು ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ನಿರಂತರ ಶ್ರಮ ಪಡಬೇಕು.ಶಿಕ್ಷಕರು ಕೂಡ ನಿರಂತರ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸವನ್ನು ಮಾಡುತ್ತೇವೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಸಹಕಾರ ಕೊಟ್ಟು ಉತ್ತಮ ಅಂಕದೊಂದಿಗೆ ತೇರ್ಗಡೆಯಾದರೆ ಮಾತ್ರ ಶಿಕ್ಷಕರ ಪ್ರಯತ್ನಕ್ಕೆ ಫಲ ಸಿಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಸಿವಿಲ್ ಕಾಮಗಾರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ. ಎ. ಹಾರಿಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಅಂಕಗಳಿಗೋಸ್ಕರ ಕಲಿಯದೆ ಉತ್ತಮ ಬದುಕು ರೂಪಿಸಲು ಕಲಿಯುವಂತ್ತಾಗಬೇಕು.
ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲವಾಗಲು ಜೀವನದುದ್ದಕ್ಕೂ ಶಿಸ್ತು ಅನುಸರಣೆ, ಹಿರಿಯರಿಗೆ, ಪೋಷಕರಿಗೆ,ಶಿಕ್ಷಕರಿಗೆ ಗೌರವ ಕೊಟ್ಟು ಅವರ ಆಶೀರ್ವಾದ ಪಡೆದುಕೊಂಡು ಕಠಿಣ ಶ್ರಮ ಪಟ್ಟರೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ.
ವಿದ್ಯಾರ್ಥಿಗಳಿಗೆ ಅಂಕಕ್ಕಿಂತ ಆಶೀರ್ವಾದವೇ ಬಹಳ ಮುಖ್ಯ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮದೊಂದಿಗೆ
ಆಶೀರ್ವಾದವನ್ನು ಕೂಡ ಪಡೆದುಕೊಂಡು ಜೀವನದ ಗುರಿಮುಟ್ಟಲು ನಿರಂತರ ಶ್ರಮ ಪಡಬೇಕೆಂದು ಕಿವಿಮಾತು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಳೆದ 2024 – 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿ ಸಿ.ಯು. ಮನ್ಸೂರ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ನಗದು ಬಹುಮಾನ ಹಾಗೂ ಶಾಲು ಹೊದಿಸಿ ಕಿರುಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ವಿದ್ಯಾರ್ಥಿ ಮನ್ಸೂನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಲೆಯ ಮಕ್ಕಳ ಸುರಕ್ಷತಾ ಸಮಿತಿ ಅಧ್ಯಕ್ಷ ಕೆಟೋಳಿರ ರಾಜ ಗಣಪತಿ, ಎಸ್ ಡಿಎಂಸಿ ಸದಸ್ಯ ಸಿ.ಎಂ.ಉಸ್ಮಾನ್,
ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


