ತಿತಿಮತಿ :ಮಾನವ ಕಾಡಾನೆ ಸಂಘರ್ಷ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿಪೂಜೆ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕು ತಿತಿಮತಿ ಭಾಗಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭೇಟಿ ನೀಡಿದರು.
ಈ ಭಾಗದ ದಶಕಗಳ ಸಮಸ್ಯೆಯಾದ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಸರಕಾರ ಹಮ್ಮಿಕೊಂಡಿರುವ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಯೋಜನೆಗೆ ಮಾನ್ಯ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಭಾಗದ ಸದ್ರಿ ಕಾಮಗಾರಿಯೂ ₹ 88 ಲಕ್ಷಗಳಲ್ಲಿ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ಒಟ್ಟು ಬ್ಯಾರಿಕೆಡ್ ನಿರ್ಮಾಣಕ್ಕಾಗಿ ₹ 20 ಕೋಟಿ ಮೀಸಲಿರಿಸಿದೆ. ಬಂಬು ಕಾರ್ಡ್ ಪೈಸಾರಿ ಭಾಗದ ಸುಮಾರು 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೆಡ್ ಅಳವಡಿಸುವ ಕಾಮಗಾರಿ ನಡೆಯಲಿದೆ.
ಬಂಬುಕಾಡು ಪೈಸಾರಿಯಿಂದ ಕಿಸಾನ್ ತೋಟದ ಮೂಲೆಯ ತನಕ ರೈಲ್ವೆ ಬ್ಯಾರಿಕೆಡ್ ಅಳವಡಿಸುವ ಕಾರ್ಯಕ್ರಮ ಇದಾಗಿದ್ದು, ತಿತಿಮತಿ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮಾನ್ಯ ಶಾಸಕರು, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಅನೇಕ ವೈಜ್ಞಾನಿಕ ಯೋಜನೆಗಳನ್ನು ರೂಪಿಸುತ್ತಿದ್ದು, ಇಲ್ಲಿಯ ಸ್ಥಳೀಯರನ್ನು ನಿರಂತರವಾಗಿ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ತನ್ನ ಹಾಗೂ ಸರಕಾರದ ಇಚ್ಛೆಯಾಗಿದೆ. ಈ ಸಲುವಾಗಿ ತಾನು ಸಾಧ್ಯ ಇರುವ ಎಲ್ಲಾ ಮಾರ್ಗವನ್ನು ಅಳವಡಿಸಲು ಸಿದ್ಧ ಹಾಗೂ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎ ಜೆ ಬಾಬು, ವಲಯ ಅಧ್ಯಕ್ಷ ನವೀನ್, ಮಾಯಮುಡಿ ಪಂಚಾಯಿತಿ ಅಧ್ಯಕ್ಷ ಹಾಗೂ ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಟಾಟು ಮೊಣಪ್ಪ, ಜಿಲ್ಲಾ ಗ್ಯಾರಂಟಿ ಯೋಜನಾ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ, ಪಕ್ಷದ ಮುಖಂಡರಾದ ಅಜ್ಜಿಕುಟ್ಟಿರ ಗಿರೀಶ್, ವಿಲ್ಸನ್, ಮಧ್ಯಸ್ತ, ಫಿಲೋಮಿನಾ, ಅಪ್ರೂಜ್, ಅರಣ್ಯ ಅಧಿಕಾರಿಗಳು, ಐಟಿಡಿಪಿ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು.


