ವರ್ತಕರಿಂದ ರಾಷ್ಟ್ರೀಯ ಹೆದ್ದಾರಿ ನಿಯಮ ಉಲ್ಲಂಘನೆ

ಸುರೇಶ್ ಬಿಳಿಗೇರಿ.

ಪಾದಚಾರಿಗಳಿಗೆ ನಡೆಯಲೆಂದೇ ಮೀಸಲಾಗಿರುವ ಹೆದ್ದಾರಿ ಬದಿಯ ಫೂಟ್ ಪಾತ್ ಗಳು ದಿನೇ ದಿನೇ ವರ್ತಕರ ಫಲಕಗಳ ಪಾಲಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿಯ ನಿಯಮವನ್ನು ಉಲ್ಲಂಗಿಸುತ್ತಿರುವುದು ಸ್ಪಷ್ಟವಾಗಿದ್ದರೂ ಕುಶಾಲನಗರ ಪುರಸಭೆ ಕಣ್ಮುಚ್ಚಿ ಕುಳಿತಿದೆ.

ಏನಿದು ಸಮಸ್ಯೆ?

ಕೊಡಗಿನ ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರ ಎಂಬ ವಾಣಿಜ್ಯ ನಗರವೊಂದಿದ್ದು ನಿತ್ಯಸಾವಿರಾರು ವರ್ತಕರು ಕೊಡಗಿನ ಬೇರೆ ಬೇರೆ ಪಟ್ಟಣಗಳಿಂದ ವ್ಯಾಪಾರ ವಹಿವಾಟಿನ ಸರಕುಗಳಿಗಾಗಿ ಇಲ್ಲಿಗೆ ಬರುತ್ತಾರೆ. ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಈ ಪಟ್ಟಣದ ಮೂಲಕವೇ ಪ್ರವೇಶ ಪಡೆಯುತ್ತಾರೆ. ಕೊಡಗಿನಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮದ ಕೇಂದ್ರಬಿಂದುವಾಗಿರುವ ಕುಶಾಲನಗರ ಪಟ್ಟಣ ಈಗ ಹೊಸದೊಂದು ಸಮಸ್ಯೆ ಎದುರಿಸುತ್ತಿದೆ.

ರಸ್ತೆಯನ್ನೇ ಆಕ್ರಮಿಸಿಕೊಳ್ಳುತ್ತಿರುವ ಕೆಲ ವರ್ತಕರು:

ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಹುತೇಕ ಅಂಗಡಿ ಮಾಲೀಕರು ತಮ್ಮ ಮಳಿಗೆಯ ನಾಮಫಲಕವನ್ನು ರಾಷ್ಟ್ರೀಯ ಹೆದ್ದಾರಿ ನಿಯಮವನ್ನು ಉಲ್ಲಂಗಿಸಿ ರಸ್ತೆ ಬದಿಗಳಲ್ಲೇ ಅಳವಡಿಸುತ್ತಿರುವುದ ಪಾದಚಾರಿಗಳು ಮತ್ತು ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಅವಲಂಭಿಸುವ ನೂರಾರು ವಾಹನಗಳ ಮಾಲೀಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇಲ್ಲಿನ ರಸ್ತೆ ಬದಿಯಲ್ಲಿರುವ ಅಂಗಡಿಗಳ ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯಲ್ಲಿ ಪರಸ್ಪರ ಪೈಪೋಟಿಯಲ್ಲಿ ಇಟ್ಟಿರುವ ಬೋರ್ಡ್ ಗಳು ಸುಂದರ ನಗರಕ್ಕೆ ಕಪ್ಪುಚುಕ್ಕೆಯಾಗಿ ಗೋಚರಿಸುತ್ತಿದೆ.

ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ:

ದಿನನಿತ್ಯ ನಡೆದಾಡುವ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನಡೆದಾಡಲು ಕಷ್ಟವಾಗಿದ್ದು ವಾಹನಗಳು ಬಂದಾಗ ಫುಟ್ ಪಾತ್ ನಲ್ಲಿ ತೆರಳಲಾಗದೆ ರಸ್ತೆ ಮದ್ಯೆ ಭಯದಿಂದ ನಡೆದಾಡುವ ಪರಿಸ್ಥಿತಿ ಮಕ್ಕಳು ಸೇರಿದಂತೆ ಹಿರಿಯ ನಾಗರಿಕರಿಗೂ ನಿರ್ಮಾಣವಾಗಿದೆ. ನಿತ್ಯ ನೂರಾರು ಸಾರ್ವಜನಿಕರು ಕೂದಲೆಳೆಯಿಂದ ಸಣ್ಣ ಪುಟ್ಟ ಅಪಘಾತಗಳಿಂದ ಪಾರಾಗುತ್ತಿರುವುದು ಇಲ್ಲಿ ಸಾಮಾನ್ಯವಾಗಿದ್ದು, ಜನರೆಲ್ಲ ಸ್ಥಳೀಯ ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಳಜಿಯಿಲ್ಲದ ವ್ಯಾಪಾರಸ್ಥರು:

ರಸ್ತೆ ಮದ್ಯೆ ಯಾರಿಗೇನಾದರೆ ನಮಗೇನು! ನಮ್ಮ ವ್ಯಾಪಾರ ವೃದ್ಧಿಸಬೇಕೆಂದ ಸ್ವಾರ್ಥ ಚಿಂತನೆಯಿಂದ ತಮ್ಮ ಮಳಿಗೆಯ ನಾಮಫಲಕವನ್ನು ಹಂತ ಹಂತವಾಗಿ ರಸ್ತೆಯ ಮದ್ಯೆ ತರುವಲ್ಲಿ ಯಶಸ್ವಿಯಾಗಿದ್ದು ಮಾತೃ ಕುಶಾಲನಗರ ಪುರಸಭೆಯ ಆಡಳಿತ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ.

ಅದೇ ರಸ್ತೆಯಲ್ಲಿ ನಡೆದಾಡುವ ಅಧಿಕಾರಿಗಳು ಕುರುಡರಾಗಿದ್ದಾರೆ:

ಕುಶಾಲನಗರದ ಇದೇ ಮುಖ್ಯ ರಸ್ತೆಗಾಗಿ ಪುರಸಭೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಸಚಿವರು ಸಂಸದರು ಸೇರಿದಂತೆ ಕ್ರಮ ಕೈಗೊಳ್ಳಲು ಅಧಿಕಾರವಿರುವ ಪ್ರತಿಯೊಬ್ಬರು ಈ ರಸ್ತೆಯಿಂದಲೇ ಓಡಾಡುತ್ತಾರೆ. ಪುರಸಭೆಯ ಅಧಿಕಾರಿಗಳಂತೂ ದಿನಾ ಹತ್ತಾರು ಬಾರಿ ಈ ರಸ್ತೆ ಮೂಲಕವೇ ಸಂಚರಿಸಿದರು ಕ್ರಮ ಕೈಗೊಳ್ಳಲಾಗದ ಮೂಕರಾಗಿ ಕುರುರಾದರಾಗಿರುವುದ ಮಾತ್ರ ದುರಾದೃಷ್ಟವಾಗಿದೆ.
ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರ ನೀಡಿರುವ ಸೂಚನೆ ಮತ್ತು ನಮ್ಮ ಆಡಳಿತ ವ್ಯವಸ್ಥೆಗೂ ಸಂಬಂದವೇ ಇಲ್ಲ ಎಂಬಂತ ವರ್ತಿಸುತ್ತಿದೆ.

ನಾಯಿಕಾಟದ ಮದ್ಯೆ ವಾಹನಗಳ ಕಾಟ:

ಒಂದೆಡೆ ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ನಡೆದಾಡು ಸಾರ್ವಜನಿಕರು ಆಕ್ರಮಿತಗೊಂಡಿರುವ ರಸ್ತೆಯನ್ನು ಅವಲಂಬಿಸಲಾಗದೆ ರಸ್ತೆಯಲ್ಲೇ ನಡೆದಾಡುವ ಪರಿಸ್ಥಿತಿ ಇದ್ದು, ಮತ್ತೊಂದೆಡೆ ನಿರಂತರ ಸಂಚರಿಸುವ ವಾಹನಗಳು ಮತ್ತು ನಡುನಡುವೆ ಜಲ್ಲಿ – ಕಲ್ಲು, ಎಂ ಸ್ಯಾಂಡ್ ತುಂಬಿದ ಲಾರಿಗಳ ದೂಳನ್ನು ಸಹಿಸಿಕೊಂಡು ಓಡಾಡುವ ಜನ ರಸ್ತೆಯ ಬದಿಯಿಟ್ಟಿರುವ ಫಲಕಗಳ ಮದ್ಯೆ ಜೀವ ಪಣಕ್ಕಿಟ್ಟು ಕುಂಟೆ -ಬಿಲ್ಲೆ ಆಟದಂತೆ ಓಡಾಡುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ.

ರಸ್ತೆಯಲ್ಲೇ ರಾರಾಜಿಸುತ್ತಿವರ ಆಹ್ವಾನ ಫಲಕಗಳು:

ಹಲವು ಕಡೆ ಪೂಟ್ ಪಾತ್ ಮತ್ತು ರಸ್ತೆ ಬದಿಯ ಡ್ರೈನೇಜ್ ನ ಭಾಗ ಹಾಗೂ ರಸ್ತೆಯ ಮಾರ್ಜಿನ್ ಪಕ್ಕದಲ್ಲಿಯೇ , ತಿಂಡಿ ಇದೆ, ರೂಮ್ ಲಭ್ಯವಿದೆ. ಟೀ -ಕಾಫೀ ಇದೆ ಎಂಬಿತ್ಯಾದಿ ಫಲಕಗಳನ್ನು ಹಾಕಲಾಗಿದೆ. ದೊಡ್ಡ ಕಲ್ಲುಗಳನ್ನು ಅವಲಂಬಿಸಿ ಹಾಕಲಾಗಿರುವ ಈ ಫಲಕಗಳು ಗಾಳಿಗೆ ಬೀಳುವುದು ಸಾಮಾನ್ಯ ಮತ್ತು ಅದು ಒಂದಲ್ಲ ಒಂದು ದಿನ ಪಾದಚಾರಿಗಳ ತಲೆಗೆ ಬೀಳುವುದನ್ನು ತಪ್ಪಿಸಲು ಅಸಾಧ್ಯ.

ನಿಯಮಗಳು ಪಾಲನೆಯಾಗುತ್ತಿಲ್ಲ:

ರಾಷ್ಟ್ರೀಯ ಹೆದ್ದಾರಿ ಹಾಗು ರಾಜ್ಯ ಹೆದ್ದಾರಿಗಳಿಗೆ ಪ್ರತ್ಯೇಕ ನಿಯಮಗಳಿವೆ. ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಸಂಚಾರಕ್ಕೆ ಅಡಚಣೆಯಾಗುವಂತೆ ಫಲಕಗಳನ್ನು ಅಳವಡಿಸುವಂತಿಲ್ಲ. ಹೆದ್ದಾರಿ ಪ್ರಾಧಿಕಾರ ಅಥವಾ ಆ ವ್ಯಾಪ್ತಿಯ ಆಡಳಿತ ವ್ಯವಸ್ಥೆಯ ಪರವಾನಗಿಯನ್ನು ಕಡ್ಡಾಯ ನಿಬಂಧನೆಗಳ ಮೂಲಕವೇ ಪಡೆದು ಫಲಕಗಳನ್ನು ಅಳವಡಿಸಬಹುದು. ಆದರೆ ಕುಶಾಲನಗರ ನಗರದಲ್ಲಿ ಮಳಿಗೆಗಳನ್ನು ನಡೆಸುವವರು ಸುಪ್ರೀಂ ಕೋರ್ಟ್ ಹಾಗೂ ರಾಜ್ಯಸರಕಾರದ ಸೂಚನೆಯನ್ನು ಪಾಲಿಸದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಇನ್ನಾದರೂ ಎಚ್ಚೆತ್ತುಕೊಂಡಿತೆ ಪುರಸಭೆ?

ಪ್ರವಾಸಿಗರು ಹಾಗೂ ವರ್ತಕರನ್ನೇ ಅವಲಂಬಿಸಿ ತುಂಬಿ ಜಿನುಗುಡುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಪಾರ್ಕಿಂಗ್ ಪೂರಕ ಪಾದಚಾರಿಗಳ ಸುರಕ್ಷತೆಗಾಗಿ ಪುರಸಭೆ ಸರಕಾರ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುವಂತಾಗಬೇಕು ಎಂಬುವುದು ಇಲ್ಲಿನ ನಿತ್ಯ ಪಾದಚಾರಿಗಳ ಒಕ್ಕೊರಲಿನ ಒತ್ತಾಯವಾಗಿದೆ

Exit mobile version