ಚೆಂಬು ಗ್ರಾ.
ಪಂ.ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಅನೀಮಿಯ ಅರಿವು ಕಾರ್ಯಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

: ಆರೋಗ್ಯ ತಪಾಸಣೆ ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಸಹಕಾರಿ -ಶೀಲಾ ಅಶೋಕ್
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯ,ಪನ್ನಡ್ಕ,ಬಾಲಂಬಿ ಅಂಗನವಾಡಿ ಕೇಂದ್ರಗಳಲ್ಲಿ ಅನೀಮಿಯ ಅರಿವು ಕಾರ್ಯಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ರವರು ಪಾಲ್ಗೊಂಡು ಮಾತನಾಡಿ ಅನಿಮಿಯ ಆರೋಗ್ಯ ಪರೀಕ್ಷೆಯಿಂದ ಮಕ್ಕಳಲ್ಲಿ ರಕ್ತಹೀನತೆ,ಅಪೌಷ್ಟಿಕತೆಯ ಮಟ್ಟವನ್ನು ಪರಿಶೀಲಿಸಿ ಅದಕ್ಕೆ ಸರಿಯಾದ ಪೌಷ್ಟಿಕಾಂಶಗಳನ್ನು ಪಡೆದುಕೊಂಡು ಹನೀಮಿಯಾದಿಂದ ಮುಕ್ತರಾಗಲು ಸಹಕಾರಿಯಾಗಲಿದೆ. ಆರೋಗ್ಯವೇ ಭಾಗ್ಯ ಎಂಬಂತೆ ಬೆಳೆಯುವ ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆಗಳನ್ನು ನಡೆಸುವುದರಿಂದ ಅವರ ಸರ್ವತ್ತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.ಅಂಗನವಾಡಿ ಕೇಂದ್ರದಲ್ಲಿ ಅನ್ನ ಪ್ರಾಶನ ಕಾರ್ಯಕ್ರಮ ನಡೆಸಿ ಆರು ತಿಂಗಳು ತುಂಬಿದ ನಂತರ ಮಗುವಿಗೆ ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ಪ್ರಾರಂಭಿಸಬೇಕೆಂದು
ತಿಳಿಸಿದರು.ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ತಮ್ಮ ಹತ್ತಿರದ ಅಂಗನವಾಡಿಗಳಲ್ಲಿ ಆಯೋಜಿಸಲಾಗುವ ಇಂತಹ ಶಿಬಿರಗಳಿಗೆ ಕರೆತಂದು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.ಬಳಿಕ ಚೆಂಬುಗ್ರಾಮದ ದೇವಾಲಯ ಅಂಗನವಾಡಿ ಕೇಂದ್ರದ ಕೈತೋಟ ಹಾಗೂ ಪನ್ನಡ್ಕ ಅಂಗನವಾಡಿ ಕೇಂದ್ರದ ಸುತ್ತಲೂ ಅಳವಡಿಸಲಾಗುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯ ಪರಿಶೀಲನೆಯನ್ನು ನಡೆಸಿದರು.
ಶಿಬಿರದಲ್ಲಿ ಆರ್ ಬಿ ಎಸ್ ಕೆ ತಂಡದ ವೈದ್ಯರಾದ ಡಾ. ಪೂಜಾ ಹಾಗೂ ಶುಶ್ರೂಷಕಿ ಅಮೃತ ಅವರ ನೇತೃತ್ವದಲ್ಲಿ ಮಕ್ಕಳ ತೂಕ, ಎತ್ತರ ಪರಿಶೀಲಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು.ಬಳಿಕ ಅನೀಮಿಯ ಮಟ್ಟ ಕಡಿಮೆ ಇರುವ ಮಕ್ಕಳಿಗೆ ವಯಸ್ಸಿಗಣಗುಣವಾಗಿ ಔಷಧಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ,ರೇಖಾ, ಮೀನಾಕ್ಷಿ ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು,ಬಾಲ ವಿಕಾಸ ಸಮಿತಿಯ ಅಧ್ಯಕ್ಷರು ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು.
ಕೊಡಗು ನ್ಯೂಸ್

