
ಮಡಿಕೇರಿ: ಉತ್ತರ ಪ್ರದೇಶದ ಅಯೋಧ್ಯ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಇಂಟರ್ನ್ಯಾಷನಲ್ ಹಾಕಿ ಟರ್ಫ್ ಮೈದಾನದಲ್ಲಿ ಸೆಪ್ಟೆಂಬರ್ 1ರಿಂದ 4ರವರೆಗೆ ನಡೆದ ಪಿ.ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯಗಳ 19 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಜೂನಿಯರ್ ಹಾಕಿ ಪಂದ್ಯಾಟದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಆಟಗಾರ್ತಿಯರನ್ನು ಒಳಗೊಂಡ ಹೈದರಾಬಾದ್ ವಲಯ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ದೇಶದ ಒಂಬತ್ತು ವಲಯಗಳ ನಡುವೆ ನಡೆದ ರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಪಂದ್ಯಾಟದಲ್ಲಿ ಕೊಡಗಿನ ಗಾಳಿಬೀಡು ನವೋದಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ತೃಪ್ತ ಅವರ ನಾಯಕತ್ವದಲ್ಲಿ ಹೈದರಾಬಾದ್ ವಲಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿತು.
ಲೀಗ್ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಅಮೋಘ ಗೆಲುವು ಸಾಧಿಸಿದ ತಂಡ, ಸೆಮಿಫೈನಲ್ನಲ್ಲಿ ಚಂಡೀಗಢ ವಲಯ ತಂಡವನ್ನು 3-0 ಗೋಲುಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿತು.
ಫೈನಲ್ ಪಂದ್ಯದಲ್ಲೂ ಹೈದರಾಬಾದ್ ವಲಯ ತಂಡ ಆರಂಭಿಕ ಮುನ್ನಡೆ ಸಾಧಿಸಿ ಉತ್ತಮ ಪೈಪೋಟಿ ನೀಡಿದರೂ, ಅಂತಿಮವಾಗಿ ಬಲಿಷ್ಠ ಲಕ್ನೋ ವಲಯ ತಂಡದ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲುಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.
ಇದೇ ವೇಳೆ ಹೈದರಾಬಾದ್ ವಲಯ ತಂಡದ ನಾಯಕಿ ಕುಮಾರಿ ತೃಪ್ತ (ಕೊಡಗು) ಹಾಗೂ ತಂಡದ ಮುನ್ನಡೆ ಆಟಗಾರ್ತಿ ಕುಮಾರಿ ಶ್ರೇಯಾ (ದಕ್ಷಿಣ ಕನ್ನಡ) ಅವರು 2026ರ ಪಿ.ಎಂ. ಶ್ರೀ ಜೆಎನ್ವಿ ಜೂನಿಯರ್ ಹಾಕಿ ರಾಷ್ಟ್ರೀಯ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿಗೂ ಭಾಜನರಾಗಿರುವುದು ವಿಶೇಷವಾಗಿದೆ.

