ದೇವಸ್ಥಾನದ ಪಕ್ಕದಲ್ಲಿ ಸತ್ತ ಹೆಗ್ಗಣಗಳ ರಾಶಿ: ಗೌಳಿ ಬೀದಿ ನಿವಾಸಿಗಳ ಆಕ್ರೋಶ
ಮಡಿಕೇರಿ, ಜು. 11: ಮಡಿಕೇರಿ ನಗರದ ಗೌಳಿ ಬೀದಿಯಲ್ಲಿರುವ ಕಂಚಿ ಕಾಮಾಕ್ಷಿ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಸತ್ತ ಹೆಗ್ಗಣಗಳನ್ನು ಎಸೆದು ಹೋಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ನಿತ್ಯ ಓಡಾಡುವ ಪ್ರದೇಶವಾಗಿರುವ ಈ ಸ್ಥಳದಲ್ಲಿ ದೊಡ್ಡ ಗಾತ್ರದ ಸತ್ತ ಹೆಗ್ಗಣಗಳನ್ನು ಎಸೆದಿರುವುದರಿಂದ ತೀವ್ರ ದುರ್ವಾಸನೆ ಹರಡುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಸುತ್ತಮುತ್ತ ವಾಸಿಸುವ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸ್ವಚ್ಛವಾಗಿರಬೇಕಾದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿಯ ಅಸ್ವಚ್ಛತೆ ಉಂಟಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಆರೋಗ್ಯ ಸಮಸ್ಯೆಗಳು ಉಂಟಾಗುವ ಆತಂಕವೂ ವ್ಯಕ್ತವಾಗಿದೆ.
ಸಂಬಂಧಪಟ್ಟ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸತ್ತ ಹೆಗ್ಗಣಗಳನ್ನು ತೆರವುಗೊಳಿಸಿ, ಪ್ರದೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಇಂತಹ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

