ನಾಪೋಕ್ಲು ಚೆರಿಯಪರಂಬುವಿನಲ್ಲಿ ಮುಸಲ್ಮಾನ ಬಾಂಧವರಿಂದ ಸಂಭ್ರಮದ ಈದುಲ್ ಫಿತರ್ ರಂಝಾನ್ ಹಬ್ಬಾಚರಣೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಸಲ್ಮಾನ ಭಾಂದವರು ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಆಚರಿಸಲ್ಪಡುವ ಪವಿತ್ರ ಈದುಲ್ ಫಿತರ್ ರಂಝಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಸೀದಿಯ ಖತೀಬರಾದ ಮೊಹಮ್ಮದ್ ಶಫೀಕ್ ಅಲಿ ಸಿರಾಜಿ ಅವರು ಈದ್ ನಮಾಜಿಗೆ ನೇತೃತ್ವ ವಹಿಸಿ ಮಾತನಾಡಿ ಇಸ್ಲಾಂ ಧರ್ಮವು ಸಮಾಜದಲ್ಲಿ ಜಾತಿ,ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಅನ್ಯೂನತೆ,ಶಾಂತಿ ಸಹಬಾಳ್ವೆಗೆ ಪ್ರಾಮುಖ್ಯತೆಯನ್ನು ನೀಡಿದೆ. ಅದೇ ರೀತಿ ಪ್ರಪಂಚದಲ್ಲಿರುವ ಎಲ್ಲಾ ಧರ್ಮವು ಅದನ್ನೇ ಪ್ರತಿಪಾದಿಸುತ್ತದೆ. ನಮ್ಮ ಪೂರ್ವಜರು ನೀಡಿದ ಸಂದೇಶದಂತೆ ಸಮಾಜದಲ್ಲಿ ಎಲ್ಲರೂ ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಈದ್ ಸಂದೇಶ ಸಾರಿದರು.
ಮಸೀದಿಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಮಾತನಾಡಿ ಪರಸ್ಪರ ಸೌಹಾರ್ದತೆ ಸಹಬಾಳ್ವೆಗೆ ಪ್ರಾಮುಖ್ಯತೆ ನೀಡುವ ಹಬ್ಬವು ನಾಡಿನಲ್ಲಿ ಶಾಂತಿಯನ್ನು ಕರುಣಿಸಲಿ ಎಂದು ಶುಭ ಕೋರಿದರು.
ಬಳಿಕ ಚೆರಿಯಪರಂಬು ದರ್ಗಾಕ್ಕೆ ತೆರಳಿದ ಸಮುದಾಯ ಬಾಂಧವರು ನಾಡಿನ ಸುಭೀಕ್ಷಕ್ಕಾಗಿ ಮತ್ತು ನಾಡಿನಲ್ಲಿ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿಹಿ ಹಂಚಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ. ಎ.ಅಹಮದ್,ಉಪಾಧ್ಯಕ್ಷರಾದ ಇಬ್ರಾಹಿಂ ಪಿ ಎಂ,
ಕೋಶಾಧಿಕಾರಿ ಪಿ. ಎಚ್.ಬಶೀರ್, ಸಹಕಾರ್ಯದರ್ಶಿ ಪಿ. ಎಂ.ಅಲಿ, ಸದಸ್ಯರಾದ ಆಶ್ರಫ್, ಮೊಯ್ದುಕುಂಞಿ,ಮದರಸ ಅಧ್ಯಾಪಕರು ಸೇರಿದಂತೆ ಜಮಾಅತ್ತಿನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

