ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಗ್ರಹಣ ಸಭೆಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ಚರ್ಚೆ

ದಿನಾಂಕ 07-03-2026 ರಂದು ಶನಿವಾರ ವಿರಾಜಪೇಟೆಯ ಪ್ರವಾಸಿಮಂದಿರದಲ್ಲಿ ಕರ್ನಾಟಕರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಭೆ ಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳು ಮತ್ತು ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.
ಚರ್ಚೆಯ ಭಾಗವಾಗಿ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರೊಂದಿಗೆ ಜಿಲ್ಲಾ ಉಸ್ತುವಾರಿಗಳಾದ ಬೆಲ್ಲು ಕಾರ್ಯಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕಲಾ ಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಮತಿ ವಾಣಿ ಮಾಚಿಮಾಡ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಶ್ , ಜಿಲ್ಲಾ ಸಲಹಗಾರರಾದ ಸಜಿಲ್ ಕುಮಾರ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪವಿತ್ರ ರೈ, ಜಿಲ್ಲಾ ವಕ್ತಾರ ಜೀವನ್, ಜಿಲ್ಲಾ ಮಹಿಳಾ ಘಟಕದ ಉಸ್ತುವಾರಿ ತನುಕಿಶೋರ್, ಕುಶಾಲನಗರ ತಾಲೂಕು ಅಧ್ಯಕ್ಷೆ ಮಂಜುಳಾ, ವಿರಾಜಪೇಟೆ ತಾಲೂಕು ಉಸ್ತುವಾರಿ ರಂಜನ್ ಹಾಜರಿದ್ದರು.
ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯ ಕುಂದುಕೊರತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಘಟನೆಯು ಜಿಲ್ಲಾ ವೈದ್ಯಾಧಿಕಾರಿಗೆ ಹೋರಾಟದ ಮುಖೇನ ಒತ್ತಡ ಹೇರಿ ಜಾಗೃತಿಗೊಳಿಸಲು ತೀರ್ಮಾನಿಸಲಾಯಿತು.
ಕನ್ನಡನಾಡಿನ ಜೀವನದಿ ಕಾವೇರಿ ಯು ಉಗಮಸ್ಥಾನವಾದ ಕೊಡಗಿನಲ್ಲಿಯೇ ನಾನಾ ಕಾರಣಗಳಿಂದ ಮಲಿನಗೊಂಡು ವಿಷಕಾರಿಯಾಗುತ್ತಿದ್ದು ನೇರವಾಗಿ ಕುಡಿಯಲು ಬಳಸಲಾರದ ಸ್ಥಿತಿಯನ್ನು ತಲುಪುತ್ತಿರುವುದು ಕಳವಳವೆಂದು ಆತಂಕ ವ್ಯಕ್ತವಾಯಿತು. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಯೊಂದಿಗೆ ಜಿಲ್ಲಾಡಳಿತವನ್ನು ಜಾಗೃತಿಗೊಳಿಸಲಾಗುತ್ತದೆ.
ಕೊಡಗಿನಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುವ ಕಾರಣ ಸರಿಯಾದ ಮಾಹಿತಿಗಳ ಕೊರತೆಯಿಂದ ಬಳಲುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಸ್ತೆ ಫಲಕ ಗಳನ್ನು ಅಳವಡಿಸುವಂತೆ ಮತ್ತು ಜಿಲ್ಲೆಯ ಪರಿಸರ ವ್ಯವಸ್ಥೆ ಮತ್ತು ಪ್ರಾಕೃತಿಕ ಸೌಂದರ್ಯ ಹಾಳಾಗದಂತೆ ಪರಿಸರ ಕಾಳಜಿ ಎಚ್ಚರಿಕೆ ಫಲಕಗಳನ್ನು ಹಾಕಲು ಮನವಿ ಪತ್ರಗಳ ಮೂಲಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡ ಗಳ ಜನ ಸಮುದಾಯಕ್ಕೆ ವಸತಿ ಯೋಜನೆ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ, ಅವರಿಗೆ ಇರುವ ಸರಕಾರಿ ಯೋಜನೆಗಳ ಪೂರ್ಣ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಮತ್ತು ಜಿಲ್ಲಾಡಳಿತ ಈ ಸಮುದಾಯಗಳನ್ನು ಪರಿಣಾಮಕಾರಿಯಾಗಿ ತಲುಪುವ ಕ್ರಮಗಳಿಗೆ ಮುಂದಾಗಬೇಕೆಂಬ ಹಿನ್ನೆಲೆಯಲ್ಲಿ ಮನವಿ ಪತ್ರಗಳ ಸಹಿತ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಒಮ್ಮತಕ್ಕೆ ಬರಲಾಯಿತು.

