ಡಿಗ್ರಿ ಪಡೆದ ವಿದ್ಯಾರ್ಥಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ — ಶಾಸಕ ಎ.ಎಸ್. ಪೊನ್ನಣ್ಣ ಅವರ ತ್ವರಿತ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ

ಗೋಣಿಕೊಪ್ಪಲು ನಿವಾಸಿ ಸಿ.ಎ. ಆಶಿಕ್ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದರು. ಆದರೆ ಬಿ.ಎಡ್ ಪದವಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡದ ಹಿನ್ನೆಲೆಯಲ್ಲಿ ಅವರು ಉದ್ಯೋಗದ ನಿಮಿತ್ತವಾಗಿ ಸಂಕಷ್ಟ ಅನುಭವಿಸುತ್ತಿದ್ದರು.
ವಿದೇಶದಲ್ಲಿ ಉದ್ಯೋಗಕ್ಕಾಗಿ ಸರ್ಟಿಫಿಕೇಟ್ ತುರ್ತಾಗಿ ಅಗತ್ಯವಿದ್ದರೂ ವಿಶ್ವವಿದ್ಯಾಲಯದ ಅಧಿಕಾರಿಗಳ ವಿಳಂಬದಿಂದ ಆತಂಕ ಎದುರಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಪೋಷಕರು ಗೋಣಿಕೊಪ್ಪಲಿನ ಸಮಾಜ ಸೇವಕರಾದ ಡಾಡು ಜೋಸೆಫ್ ಅವರ ನೆರವು ಕೋರಿ ತಮ್ಮ ಅಳಲು ಹಂಚಿಕೊಂಡರು. ತಕ್ಷಣ ಸ್ಪಂದಿಸಿದ ಡಾಡು ಜೋಸೆಫ್ ಅವರು ಈ ವಿಷಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ಅವರ ಗಮನಕ್ಕೆ ತಂದರು.
ಶಾಸಕರು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿಗೆ ನ್ಯಾಯ ಸಿಗುವಂತೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು. ಜೊತೆಗೆ ಈ ವಿಷಯದ ಮುಂದಿನ ಫಾಲೋಆಪ್ಗಾಗಿ ತಮ್ಮ ಆತ್ಮೀಯರು ಹಾಗೂ ಸಮಾಜ ಸೇವಕರಾದ ಚೋಕಂಡ ಸಂಜು ಸುಬ್ಬಯ್ಯ ಹಾಗೂ ಸ್ಪೆಷಲ್ ಆಫೀಸರ್ ಕೆ.ಎಂ. ಸೋಮಯ್ಯ ಅವರ ಸಹಕಾರ ಪಡೆಯುವಂತೆ ಮಾರ್ಗದರ್ಶನ ನೀಡಿದರು.
ಶಾಸಕರ ಮಾರ್ಗದರ್ಶನ, ವಿವಿಧ ಅಧಿಕಾರಿಗಳೊಡನೆ ಸಂಜು ಸುಬ್ಬಯ್ಯರವರ ನಿರಂತರ ಬೆನ್ನಟ್ಟುವಿಕೆ ಹಾಗೂ ಸ್ಪೆಷಲ್ ಆಫೀಸರ್ ಸೋಮಯ್ಯರವರ ಸಂಪೂರ್ಣ ಸಹಕಾರದ ಫಲವಾಗಿ ಆಶಿಕ್ ಅವರಿಗೆ ಬಿ.ಎಡ್ ಕಾನ್ವೋಕೇಶನ್ ಸರ್ಟಿಫಿಕೇಟ್ ಲಭಿಸಿದೆ.
ಈ ಸಂದರ್ಭದಲ್ಲಿ ಆಶಿಕ್ ಹಾಗೂ ಅವರ ಪೋಷಕರು ಶಾಸಕ ಎ.ಎಸ್. ಪೊನ್ನಣ್ಣ, ಚೋಕಂಡ ಸಂಜು ಸುಬ್ಬಯ್ಯ, ಕೆ.ಎಂ. ಸೋಮಯ್ಯ ಮತ್ತು ಡಾಡು ಜೋಸೆಫ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಹಾಗೂ ಅನಂತ ಕೋಟಿ ಧನ್ಯವಾದಗಳನ್ನು ತಿಳಿಸಿದ್ದಾರೆ

