ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ

KODAGU NEWS

 

ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣಕ್ಕೆ ರಾಷ್ಟ್ರದ ಪ್ರಥಮ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಶನಿವಾರಸಂತೆಯಲ್ಲಿ 105 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.

ಶನಿವಾರಸಂತೆ ಗ್ರಾಮದಲ್ಲಿ ಹುಟ್ಟಿ ಬೆಳೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಸೇನಾ ಕ್ಷೇತ್ರದಲ್ಲಿನ ಸೇವೆಯನ್ನು ಸ್ಮರಿಸಿ ಕಾರ್ಯಪ್ಪ ಅವರ ಹೆಸರಿಡಲು ಕ್ಯಾಬಿನೆಟ್ ಅನುಮೋದನೆ ಪಡೆಯಲಾಗುವುದು.

ಶನಿವಾರಸಂತೆ ಬಸ್ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕೊಡ್ಲಿಪೇಟೆಯಲ್ಲೂ ಸಹ ಜಾಗ ನೀಡಿದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಆ ನಿಟ್ಟಿನಲ್ಲಿ ಜಾಗ ಒದಗಿಸುವಂತೆ ಊರಿನ ಪ್ರಮುಖರನ್ನು ಕೋರಿದರು.

ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ 670 ಕೋಟಿ ಗೂ ಹೆಚ್ಚು ಮಹಿಳೆಯರು ಬಸ್ ಸಂಚಾರ ಮಾಡಿದ್ದಾರೆ. ಇದು ದಾಖಲೆ ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಸರ್ಕಾರ 10 ಸಾವಿರ ಚಾಲಕರು ಮತ್ತು ನಿರ್ವಾಹಕರನ್ನು ನೇಮಕಾತಿ ಮಾಡಿದ್ದು, ಇದರಲ್ಲಿ 9 ಸಾವಿರ ಮಂದಿ ನಿರ್ವಾಹಕರು ಮತ್ತು ಚಾಲಕರನ್ನು ನೇರ ನೇಮಕಾತಿ ಮಾಡಲಾಗಿದೆ. ಒಂದು ಸಾವಿರ ಚಾಲಕರು ಮತ್ತು ನಿರ್ವಾಹಕರನ್ನು ‘ಅನುಕಂಪದ ಆಧಾರದ ಮೇಲೆ’ ಅರ್ಹರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ಹಿಂದೆ 5,800 ಬಸ್‍ಗಳು ಹಾಗೂ ಪ್ರಸಕ್ತ ವರ್ಷ 2 ಸಾವಿರ ಬಸ್ಸುಗಳು ಒಟ್ಟು 7,800 ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತವೆ. ಪ್ರತೀ ವರ್ಷ ಕಾಲಾನು ಕಾಲಕ್ಕೆ ಹೊಸ ಬಸ್‍ಗಳನ್ನು ಖರೀದಿಸಿ, ಬಸ್ಸು ಓಡಾಟಕ್ಕೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಬರುವ ಬಜೆಟಿನಲ್ಲಿ ಸಾರಿಗೆ ಸಂಪರ್ಕಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡಲಾಗಿದ್ದು, ಜಿಲ್ಲೆಗೂ ಸಹ ಸಾರಿಗೆ ಇಲಾಖೆಯಲ್ಲಿ ಆಗಬೇಕಿರುವ ಕೆಲಸಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಕೊಡಗು ಜಿಲ್ಲೆಗೆ ಹೆಚ್ಚಿನ ಬಸ್ಸು ಸೌಕರ್ಯ ಕಲ್ಪಿಸಲಾಗುವುದು ಎಂದು ಸಚಿವರು ವಿವರಿಸಿದರು.

ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸಂಭವಿಸುವ ಪವಿತ್ರ ತೀರ್ಥೋದ್ಭವ ಜಾತ್ರೆಗೆ ಸರ್ಕಾರದಿಂದ ಮೂರು ವರ್ಷದಿಂದ ಅನುದಾನ ನೀಡಲಾಗುತ್ತಿದೆ. ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಕಾಳಜಿಯಿಂದ ಅನುದಾನ ನೀಡಲಾಗುತ್ತಿದೆ ಎಂದು ಮುಜರಾಯಿ ಸಚಿವರು ಆದ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯರೊಬ್ಬರು ಶನಿವಾರಸಂತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆ, ಆ ಸಂದರ್ಭದಲ್ಲಿ ಭರವಸೆ ನೀಡಲಾಗಿತ್ತು. ಎಲ್ಲರ ಆಶೀರ್ವಾದದಿಂದ ಜಯ ಗಳಿಸಿದ ನಂತರ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಡಾ.ಬಿ.ಸಿ.ಸತೀಶ ಅವರು ಜಾಗ ಗುರುತಿಸಿದ್ದರು. ಅದರಂತೆ ಮಾನ್ಯ ಸಾರಿಗೆ ಸಚಿವರಲ್ಲಿ ಮನವಿ ಮಾಡಿದಾಗ ತಕ್ಷಣವೇ 105 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ, ಭೂಮಿ ಪೂಜೆ ನೆರವೇರಿಸಲಾಗಿತ್ತು. ಅದರಂತೆ ಒಂದು ವರ್ಷದಲ್ಲಿಯೇ ನಿರ್ಮಾಣ ಮಾಡಲಾಗಿರುವುದು ವಿಶೇಷವೇ ಸರಿ ಎಂದು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಹುಟ್ಟಿದ ಊರಿನಲ್ಲಿ ಬಸ್ ನಿಲ್ದಾಣಕ್ಕೆ ಕಾರ್ಯಪ್ಪ ಹೆಸರಿಡಬೇಕೆಂದು ಅಧಿವೇಶನದಲ್ಲಿ ಗಮನ ಸೆಳೆಯಲಾಗಿತ್ತು. ಅದರಂತೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ನುಡಿದರು.

ಈ ಜಾಗವನ್ನು ಗ್ರಾ.ಪಂ.ಅವರು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಡಾ.ಮಂತರ್ ಗೌಡ ಅವರು ಕೊಡ್ಲಿಪೇಟೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಗತ್ಯ ಅನುದಾನ ನೀಡುವಂತೆ ಮತ್ತು

ಕೊಡಗು ಜಿಲ್ಲೆಗೆ ಪ್ರತ್ಯೇಕ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಆರಂಭಿಸಬೇಕು.

ಕೊಡಗು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಬೇಕು. ಚಾಲಕರು ಮತ್ತು ನಿರ್ವಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುವಂತಾಗಬೇಕು ಎಂದು ಅವರು ಕೋರಿದರು.

ಈಗಾಗಲೇ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಕೆಎ.12 ನಂಬರ್ ನೋಂದಣಿ ಸಂಖ್ಯೆಯನ್ನು ಸಚಿವರು ಕೊಡಿಸಿದ್ದಾರೆ ಎಂದು ಶಾಸಕರು ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯ ದೇವಾಲಯಗಳ ಅಭಿವೃದ್ಧಿಗೆ ಇನ್ನಷ್ಟು ಹೆಚ್ಚಿನ ಅನುದಾನ ಒದಗಿಸುವಂತೆ ಅವರು ಸಚಿವರಲ್ಲಿ ಮನವಿ ಮಾಡಿದರು.

ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷರಾದ ಗೀತಾ ಹರೀಶ್ ಅವರು ಮಾತನಾಡಿ ಶನಿವಾರಸಂತೆಯಲ್ಲಿ ನಡೆಯುವ ಸಂತೆಗೆ ವ್ಯಾಪಾರ ವಹಿವಾಟಿಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಂತೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಅಗತ್ಯ ಅನುದಾನ ಬಿಡುಗಡೆಗೆ ಶಾಸಕರಲ್ಲಿ ಕೋರಿದರು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಹಲವು ದಶಕಗಳ ಕನಸಾಗಿತ್ತು. ಅದು ನನಸಾಗಿದೆ ಎಂದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿವೃದ್ಧಿ ಕೆಲಸದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ವಾಮೀಜಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಿಪೇಟೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವಂತಾಗಬೇಕು ಎಂದು ಸಚಿವರಲ್ಲಿ ಸದಾಶಿವ ಸ್ವಾಮೀಜಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ ಅವರು ಮಾತನಾಡಿ ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಸದಾ ಕೈಜೋಡಿಸಲಾಗಿದೆ. ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

25 ವರ್ಷಗಳಿಂದ ಆಗದ ಕೆಲಸ, 25 ತಿಂಗಳಲ್ಲಿ ಆಗಿರುವುದು ಮೆಚ್ಚಲೇಬೇಕು ಎಂದು ಎಚ್.ಎಸ್.ಚಂದ್ರಮೌಳಿ ಅವರು ನುಡಿದರು.

ಗುತ್ತಿಗೆದಾರರಾದ ರೇವಣ್ಣ ಪ್ರಸಾದ್ ಅವರನ್ನು ಇದೇ ಸಂದರ್ಭದಲ್ಲಿ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.

ವಿಧಾನಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷರಾದ ಜಿ.ಎಂ.ಕಾಂತರಾಜು, ವಿ.ಪಿ.ಶಶಿಧರ, ಜಾನ್ಸನ್, ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು, ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಈರಸಪ್ಪ, ಪ್ರಮುಖರಾದ ಲಕ್ಷ್ಮಣ, ಕೆ.ಪಿ.ಚಂದ್ರಕಲಾ, ಜನಾರ್ಧನ, ಶರತ್ ಶೇಖರ್, ತಹಶೀಲ್ದಾರರಾದ ಕೃಷ್ಣಮೂರ್ತಿ, ಇತರರು ಇದ್ದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಿಘ್ನೇಶ್ವರ ಬಾಲಿಕ ಪ್ರೌಢ ಶಾಲೆಯ ವಿದ್ಯಾರ್ಥಿನೀಯರು ರೈತಗೀತೆ ಹಾಡಿದರು. ರೋಷಿ ಪ್ರಾರ್ಥಿಸಿದರು. ಜಯಕುಮಾರ ಸ್ವಾಗತಿಸಿದರು. ಜಸಿಂತಾ ನಿರೂಪಿಸಿದರು.

Exit mobile version