ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?

ಕೊಡಗು, ಜನವರಿ 10: ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿ ವಿಷಯವಾಗಿ ಹೊರಹೊಮ್ಮಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ತೀರ್ಮಾನದ ಹೆಸರಿನಲ್ಲಿ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

 

ಸಾವು-ಸಮಾರಂಭಕ್ಕೂ ಬಾರದಂತೆ ಆದೇಶ

ಗ್ರಾಮದ ಅಜಂತ ಮತ್ತು ನವೀನ್ ಎಂಬುವವರ ಎರಡು ಕುಟುಂಬಗಳನ್ನು ಸಮಿತಿಯ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಹಿಷ್ಕಾರದ ಪರಿಣಾಮವಾಗಿ ಗ್ರಾಮಸ್ಥರು ಆ ಕುಟುಂಬಗಳೊಂದಿಗೆ ಮಾತನಾಡುವಂತಿಲ್ಲ, ಸಾವು–ಸಮಾರಂಭ, ಸಭೆ, ಮದುವೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೆ, ಈ ಕುಟುಂಬಗಳ ತೋಟದ ಕೆಲಸಗಳಿಗೆ ಕಾರ್ಮಿಕರು ತೆರಳದಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

 

ಆರೋಪ ತಳ್ಳಿಹಾಕಿದ ಸಮಿತಿ

ಬಹಿಷ್ಕಾರದ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಂಪರ್ಕ ಕಡಿತಗೊಂಡ ಪರಿಣಾಮ ಈ ಎರಡು ಕುಟುಂಬಗಳು ಮಾನಸಿಕ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕೂತಿ ಗ್ರಾಮ ಸಮಿತಿಯು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಗ್ರಾಮ ಕಟ್ಟುಪಾಡುಗಳನ್ನು ಮೀರಿ ನಡೆದುಕೊಂಡ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿತ್ತು. ಆದರೆ ದಂಡವನ್ನು ಕಟ್ಟದೆ ಇರುವುದರಿಂದ ಗ್ರಾಮಸ್ಥರು ಸ್ವಯಂಸ್ಪೂರ್ತಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಸ್ಪಷ್ಟನೆ ನೀಡಿದೆ

ಕೃಪೆ : TV9 ಕನ್ನಡ

Exit mobile version