ಕುಶಾಲನಗರ ಜೂ. 9: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ರೂ. 26 ಲಕ್ಷ ವೆಚ್ಚದಲ್ಲಿ ಜನತಾ ಕಾಲೋನಿ, ವಿನಾಯಕ ಹಾಗೂ ಮಾರುತಿ ಬಡಾವಣೆಗಳಲ್ಲಿನ ರಸ್ತೆ ಕಾಮಗಾರಿ, ಇದಲ್ಲದೆ ಕೂಡುಮಗಳೂರು ಗ್ರಾ.ಪಂ.ನ ನವಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿಗೂ ಅಧಿಕ ಅನುದಾನ ಒದಗಿಸಲಾಗಿದ್ದು , ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಿದ್ದು , ಅವರ ಸಹಕಾರ ನಮಗೆ ಸದಾ ಇದ್ದು, ಮುಂದೆಯೂ ನಮಗೆ ಅಗತ್ಯವಿರುವ ಅನುದಾನ ಒದಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಆನೆ ಮಾನವ ಸಂಘರ್ಷ ನಿಯಂತ್ರಣ ಸಂಬಂಧ ಎಲ್ಲಾ ರೀತಿಯ ಪರಿಣಾಮಕಾರಿ ಯೋಜನೆಗಳನ್ನು ಈಗಾಗಲೆ ಕಾರ್ಯರೂಪಕ್ಕೆ ತರಲಾಗಿದೆಯಾದರೂ ಕಾಡಾನೆಗಳು ಬೇರೆ ಬೇರೆ ಮಾರ್ಗದ ಮೂಲಕ ಕಾಡಿನಿಂದ ಹೊರಬಂದು ಅಪಾಯ ಉಂಟು ಮಾಡುತ್ತಿರುವ ಕಾರಣ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖರಾಗಿರುವ ಮೂಲಕ ಸಂಭಾವ್ಯ ಜೀವ ಹಾನಿ ತಡೆಗಟ್ಟಲು ಪ್ರಯತ್ನಿಸಬೇಕಿದೆ ಎಂದರು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮುಳ್ಳುಸೋಗೆ ಗ್ರಾ.ಪಂ. ಕುಶಾಲನಗರ ಪುರಸಭೆಗೆ ವಿಲೀನಗೊಂಡ ಬಳಿಕ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಕ್ಕೆ ವಿರುದ್ದವಾಗಿ ಗೊಂದಿಬಸವನಹಳ್ಳಿ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ‌ಮುತ್ತಪ್ಪ, ನಗರ ಕಾಂಗ್ರೆಸ್‌ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್‌, ಪುರಸಭೆ ಮಾಜಿ ಸದಸ್ಯ ವಿ.ಜೆ. ನವೀನ್ ಗೌಡ, ವಿ.ಎಸ್. ಆನಂದಕುಮಾ‌ರ್, ಗ್ರಾ.ಪಂ. ಮಾಜಿ ಸದಸ್ಯ ಮಣಿ ಸೇರಿದಂತೆ ಪ್ರಮುಖರಾದ ರಂಜನ್, ಆದಂ, ಗಯಾಜ್, ಆನಂದ್‌ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.

ಕುಶಾಲನಗರದಲ್ಲಿ ಶಾಸಕ ಡಾ. ಮಂತರ್ ಗೌಡ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ , ಕಾಂಗ್ರೆಸ್ ಪಕ್ಷದ ನಾಯಕರು ಇನ್ನಿತರರಿದ್ದರು.

Exit mobile version