
ಬೆಂಗಳೂರು: ಕೇಂದ್ರ ಸರಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲು ಕಂಡ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮಹಿಳಾ ಮೀಸಲಾತಿ ತರುವ ನಿಜವಾದ ಕಾಳಜಿ ಇದ್ದಲ್ಲಿ ಹಾಲಿ ಇರುವ 543 ಲೋಕಸಭಾ ಸ್ಥಾನಗಳ ಪೈಕಿ 181 ಸ್ಥಾನಗಳನ್ನು ಮಹಿಳೆಯರಿಗೆ ಮೊದಲು ಮೀಸಲಿಡಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಬಿಜೆಪಿಗೆ ಸವಾಲು ಎಸೆದಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು ಹಾಲಿ ಇರುವ 543
ಲೋಕಸಭಾ ಸ್ಥಾನಗಳನ್ನು 815 ಕ್ಕೆ ಹೆಚ್ಚಿಸಿ ಅದರಲ್ಲಿ ಮಹಿಳಾ ಮೀಸಲಾತಿಯನ್ನು ಶೇಕಡ 33 ರಷ್ಟು ನೀಡುವ ಬದಲು ಹೀಗಿರುವ 543 ರಲ್ಲೇ ಮಹಿಳಾ ಮೀಸಲಾತಿ ಮುಂದಿನ 2029ರ ಲೋಕಸಭಾ ಜಾರಿಗೆ ತರಲಿ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ನಾರಿಶಕ್ತಿ ನಂದನ್ ಅಧಿನಿಯಮ ಮೂರನೇ ಎರಡಷ್ಟು ಬಹುಮತ ಪಡೆಯಲು ಸಾಧ್ಯವಾಗದೆ ಸೋಲು ಕಂಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೊದಲ ಸೋಲಾಗಿದೆ ಎಂದು ಮುದ್ದಪ್ಪ ಅಭಿಪ್ರಾಯಿಸಿದ್ದಾರೆ.
ಹಾಲಿ ಇರುವ 543 ರಲ್ಲಿ 180 ಸ್ಥಾನ ಗಳನ್ನು ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಮಹಿಳೆಯರಿಗೆ ಮೀಸಲಿದ್ದು ಚುನಾವಣೆ ನಡೆಸಿ ಎಂದು ಸವಾಲು ಹಾಕಿದ್ದಾರೆ. 106 ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಹಾಲಿ ಲೋಕ ಸಭಾ ಸ್ಥಾನಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತನ್ನಿ ಎಂದು ಆಗ್ರಹಿಸಿದ್ದಾರೆ. ಕರ್ನಾಟಕದ 224 ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ನೀಡಲಿ ಎಂದು ಅವರು ಇದೆ ವೇಳೆ ಒತ್ತಾಯಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಎಲ್ಲಾ ವಿಧಾನಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆಯಾಗಬೇಕು. ಈಗಾಗಲೇ ದೇಶವ್ಯಾಪಿ ಜನಗಣತಿ ಆರಂಭಗೊಂಡಿದೆ. 6-8 ತಿಂಗಳ ಒಳಗಾಗಿ ಹೊಸ ಜನಗಣತಿ ಸಮೀಕ್ಷೆ ಕಾರ್ಯ ಮುಕ್ತಾಯವಾಗಲಿದ್ದು, ಕ್ಷೇತ್ರ ವಿಂಗಡಣೆ ಮಾಡಲು ಕೇಂದ್ರ ಯಾಕಿಷ್ಟು ಅವಸರ ತೋರುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಮುದ್ದಪ್ಪ ಬಿಜೆಪಿ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಿಂದ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು ಕರ್ನಾಟಕ ರಾಜ್ಯವೊಂದರಿಂದಲೇ ಕಳೆದ ಬಾರಿ 5 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು ಕೇಂದ್ರದಿಂದ ಕೇವಲ 60 ಸಾವಿರ ಕೋಟಿ ಮಾತ್ರ ರಾಜ್ಯಕ್ಕೆ ಸಿಗುತ್ತಿದೆ ಎಂದು ಹೇಳಿದ್ದಾರೆ. ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳನ್ನು ಹೀಗೆ ಕಡೆಗಣಿಸಿದರೆ ಮುಂದೊಂದು ದಿನ ಪ್ರತ್ಯೇಕ ರಾಷ್ಟ್ರದ ಕಿಚ್ಚು ಹುಟ್ಟಿಕೊಂಡರೂ ಆಶ್ಚರ್ಯವಿಲ್ಲ ಎಂದು ನಾಪಂಡ ಮುದ್ದಪ್ಪ ಅಭಿಪ್ರಾಯಿಸಿದ್ದಾರೆ.


